ಮಂಗಳೂರು: ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ವರ್ಷದ ಸಂಸ್ಥಾಪಕರ ದಿನಾಚರಣೆಯು ಫೆಬ್ರವರಿ 18, 2023 ಶನಿವಾರ ಸಂಜೆ 4 ಗಂಟೆಗೆ ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜರುಗಲಿದೆ.
ಈ ಬಾರಿಯ ಸಂಸ್ಥಾಪಕರ ದಿನಾಚರಣೆಯ ಉಪನ್ಯಾಸವನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿರುವ ಪ್ರೊ. ಎಸ್. ಸಡಗೋಪನ್, ಸಂಸ್ಥಾಪಕ ನಿರ್ದೇಶಕರು, ಐಐಐಟಿ, ಬೆಂಗಳೂರು, ಇವರು ನೀಡಲಿದ್ದಾರೆ. ಶ್ರೀಯುತರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮುಗಿಸಿ, ಉನ್ನತ ವ್ಯಾಸಂಗವನ್ನು ಅಮೇರಿಕದಲ್ಲಿ ಮಾಡಿರುತ್ತಾರೆ. ಸುಮಾರು 25 ವರ್ಷಗಳಿಗೂ ಮಿಕ್ಕಿ ದೇಶದ ವಿವಿಧ ಪ್ರತಿಷ್ಠಿತ ಐಐಟಿ, ಐಐಎಮ್ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವಿದೇಶದ ಹಲವು ಐಟಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ಮಾಡಿದ ಅಪಾರ ಅನುಭವವಿದೆ. ಮಾಹಿತಿ ತಂತ್ರಜ್ಞಾನದ ವಿಷಯದಲ್ಲಿ ಅನೇಕ ಉಪನ್ಯಾಸಗಳನ್ನು ನೀಡಿರುವುದಲ್ಲದೆ ಏಳು ಪುಸ್ತಕಗಳನ್ನು ಹೊರತಂದಿದ್ದಾರೆ. ಶ್ರೀಯುತರು ಹಲವು ಬ್ಯಾಂಕುಗಳೂ ಸೇರಿದಂತೆ ಅನೇಕ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಗೌರವ ಸಲಹೆಗಾರರಾಗಿದ್ದಾರೆ.
ಉಪನ್ಯಾಸದ ನಂತರ ಕರ್ನಾಟಕ ಶಾಸ್ತಿçÃಯ ಸಂಗೀತ ಕಛೇರಿ-ವಯೋಲಿನ್ ಹಾಗು ವೀಣಾ ವಾದನ ‘ಸ್ಟ್ರಿಂಗ್ಸ್ ಅಟ್ಯಾಚ್ಡ್’ ಎನ್ನುವ ಹೆಸರಿನಲ್ಲಿ ನೆರವೇರಲಿದೆ.
ವಿದ್ವಾನ್ ಆರ್. ಕುಮರೇಶ್ ಅವರು ವಯೋಲಿನ್ ಹಾಗು ವಿದುಷಿ ಡಾ. ಜಯಂತಿ ಕುಮರೇಶ್ ಅವರು ವೀಣಾ ವಾದನವನ್ನು ನಡೆಸಿಕೊಡಲಿದ್ದಾರೆ. ವಿದ್ವಾನ್ ಕೆ. ಯು. ಜಯಚಂದ್ರ ರಾವ್ ಮೃದಂಗದಲ್ಲಿ ಹಾಗು ವಿದ್ವಾನ್ ಪ್ರಮಥ್ ಕಿರಣ್ ತಬಲಾ ಮತ್ತು ಮೋರ್ಚಿಂಗ್ನಲ್ಲಿ ಸಹಕಾರವನ್ನು ನೀಡಲಿದ್ದಾರೆ. ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಪಿ. ಪ್ರದೀಪ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ‘ನಮ್ಮ ಕುಡ್ಲ’ ಚಾನೆಲ್, ‘ನಮ್ಮ ಟಿವಿ’ ಚಾನೆಲ್ ಹಾಗು ‘ಆಕಾಶವಾಣಿ ಮಂಗಳೂರು’ ನೇರಪ್ರಸಾರ ಮಾಡಲಿದೆ. ಅದಲ್ಲದೆ ಇದು ಬ್ಯಾಂಕಿನ ಯುಟ್ಯೂಬ್ ಹಾಗೂ ಫೇಸ್ಬುಕ್ಗಳಲ್ಲಿಯೂ ನೇರಪ್ರಸಾರವಾಗಲಿದೆ. ಕಾರ್ಯಕ್ರಮದ ವೆಬೆಕ್ಸ್ ಲೊಗಿನ್ ಐಡಿಯನ್ನು (Log in ID) ದಿನಾಂಕ 18-02-2023 ರಂದು ಬ್ಯಾಂಕಿನ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
“ತೊಂಬತ್ತೊಂಬತ್ತು ವರ್ಷಗಳಿಂದ ಅನುಪಮ ಸೇವೆಯನ್ನು ನೀಡುತ್ತಿರುವ ಬ್ಯಾಂಕು, ಫೆಬ್ರವರಿ 18, 2023 ರಂದು 100ರ ಹರೆಯಕ್ಕೆ ಪಾದಾರ್ಪಣೆ ಮಾಡಲಿದೆ. ಅಂದು ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳಿಗೆ ಶುಭಚಾಲನೆಯನ್ನು ನೀಡಿ, ನೂರು ವರ್ಷ ಪೂರ್ಣಗೊಳ್ಳುವ ಫೆಬ್ರವರಿ 18, 2024 ರವರೆಗೆ ಅಂದರೆ ಒಂದು ವರ್ಷದ ಪರ್ಯಂತ ಬ್ಯಾಂಕ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
1924 ಫೆಬ್ರವರಿ 18ರಂದು ಸಾಮಾಜಿಕ ಕಳಕಳಿಯೊಂದಿಗೆ ಜನ್ಮತಾಳಿದ ಕರ್ಣಾಟಕ ಬ್ಯಾಂಕ್ ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ, ಸಂಸ್ಥಾಪಕರ ಮೂಲ ಆಶಯಕ್ಕೆ ಬದ್ಧವಾಗಿ ಇಂದು ಗ್ರಾಹಕರ ಮೆಚ್ಚಿನ ಬ್ಯಾಂಕ್ ಆಗಿ ನಿರಂತರ ಪ್ರಗತಿಪಥದಲ್ಲಿದೆ. ಆಧುನಿಕ ಕಾಲಘಟ್ಟದ ನೂತನ ಆವಿಷ್ಕಾರಗಳಾದ ಡಿಜಿಟಲ್ ತಂತ್ರಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜನಸಾಮಾನ್ಯರ ಸೇವೆಗೆ ಕರ್ಣಾಟಕ ಬ್ಯಾಂಕ್ ಸದಾ ಕಟಿಬದ್ಧವಾಗಿದೆ” ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀ ಮಹಾಬಲೇಶ್ವರ ಎಂ.ಎಸ್ ಅವರು ತಿಳಿಸಿದ್ದಾರೆ.