ಮಂಗಳೂರು: ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಕ್ರೈಂ ರೇಟ್ ಕಡಿಮೆಯಾಗಿದೆ. ಆದರೆ ವೈಟ್ ಕಾಲರ್ ಕ್ರೈಂ ಆದ ಸೈಬರ್ ಕ್ರೈಂ ಹೆಚ್ಚಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಪೊಲೀಸ್ ಠಾಣೆಗಳ ಉದ್ಘಾಟನೆಗಳ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು ಸೈಬರ್ ಕ್ರೈಂ ತಡೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಮಿಷನರ್ ಗೆ, ಐಜಿ ಮತ್ತು ಎಸ್ಪಿಗೆ ಒಂದು ಟಾರ್ಗೆಟ್ ಕೊಟ್ಟಿದ್ದೇನೆ. ಕರಾವಳಿಯಲ್ಲಿ ಶಾಂತಿ ಕಾಪಾಡಬೇಕು. ಇಲ್ಲ ನಾನು ನಿಮ್ಮನ್ನ ಟಾರ್ಗೆಟ್ ಮಾಡುತ್ತೇನೆ ಎಂದು ಹೇಳಿದ್ದೇನೆ.
ಪೊಲೀಸ್ ಠಾಣೆಗೆ ಬಂದವರಿಗೆ ಸಮಾಧಾನದಲ್ಲಿ ವ್ಯವಹರಿಸಬೇಕು. ಅವರಿಗೆ ನ್ಯಾಯ ಸಿಗುತ್ತದೆ ಎಂಬ ಭಾವನೆಯಿಂದ ವಾಪಸ್ ಹೋಗಬೇಕು ಎಂದು ಸೂಚಿಸಿದ್ದೇನೆ. ಇನ್ನು ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಸೆಂಟ್ರಲ್ ಕಮಾಂಡ್ ಸೆಂಟರ್ ನಿರ್ಮಾಣ ಮಾಡುತ್ತಿದ್ದೇವೆ. 134 ಕೋಟಿ ವೆಚ್ಚದಲ್ಲಿ ಕಟ್ಟಡ ಮತ್ತು ಮೂಲಸೌಕರ್ಯ ತಯಾರುಗುತ್ತಿದೆ. ಇದರಿಂದ ಇಡೀ ರಾಜ್ಯದ ಯಾವ ಪೊಲೀಸ್ ಠಾಣೆಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಬೆಂಗಳೂರಿನ ಆ ಕಟ್ಟಡದಲ್ಲಿರುವವರಿಗೆ ಗೊತ್ತಾಗಲಿದೆ. ಇಂತಹ ವ್ಯವಸ್ಥೆಯನ್ನು ಶೀಘ್ರವಾಗಿ ಉದ್ಘಾಟನೆ ಮಾಡಲಿದ್ದೇವೆ ಎಂದು ಹೇಳಿದರು.
ಮಂಗಳೂರು ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಗೃಹಸಚಿವ ಪರಮೇಶ್ವರ್ ಅವರನ್ನು ಉಲ್ಲೇಖಿಸಿ ನೀವು ಸಿಎಂ ಆಗಿ ಮಂಗಳೂರಿಗೆ ಬನ್ನಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖ್ಯಮಂತ್ರಿ ಗಾದಿಯ ಬೆಂಕಿಗೆ ತುಪ್ಪ ಸುರಿದರು. ಗೃಹ ಸಚಿವರಿಗೆ ನೀವು ಸಿಎಂ ಆಗಿ ಮಂಗಳೂರಿಗೆ ಬನ್ನಿ ಎಂದು ಶಾಸಕ ಭರತ್ ಹೇಳಿದರು. ಇದಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ ನಕ್ಕು ಸುಮ್ಮನಾದರು.