ಮಂಗಳೂರು: ಜಮ್ಮು ಕಾಶ್ಮೀರದಲ್ಲಿ ಕೇವಲ ಎರಡು ವಾರಗಳ ಅಂತರದಲ್ಲಿ ಎರಡು ಯಕ್ಷಗಾನ ಪ್ರದರ್ಶನ ನೀಡಿ, ಅಲ್ಲಿನ ಸರಕಾರ ಮತ್ತು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿರುವುದು ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಸಿಕ್ಕಿರುವ ದೊಡ್ಡ ಗೌರವ ಎನ್ನಲೇಬೇಕು.
ಈ ಮೊದಲು ಕಾಶ್ಮೀರದಲ್ಲಿ ಹಿಂದಿ ಯಕ್ಷಗಾನ ನೀಡುವ ಮೂಲಕ ಅಲ್ಲಿನ ಗವರ್ನರ್ ಮನೋಜ್ ಸಿನ್ಹ ಅವರ ಮೆಚ್ಚುಗೆಗೆ ಪಾತ್ರರಾಗಿದ್ದ ಪಾವಂಜೆ ಮೇಳದ ಆಯ್ದ ಕಲಾವಿದರಿಗೆ ವೈಷ್ಣೋದೇವಿಯಲ್ಲಿ ಮತ್ತೊಂದು ಅವಕಾಶವನ್ನು ಅಲ್ಲಿನ ಸರಕಾರವು ನೀಡಿದೆ. ಶ್ರೀ ಮಾತಾ ವೈಷ್ನೋದೇವಿ ಶ್ರೈನ್ ಬೋರ್ಡ್ ಕಟ್ರಾ ಜಮ್ಮು ಕಾಶ್ಮೀರ ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಆಯೋಜಿಸುವ ಒಂಬತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮನೋಜ್ ಸಿನ್ಹ ಅವರ ಸೂಚನೆ ಮೇರೆಗೆ ದೇವಿಮಹಾತ್ಮೆ ಯಕ್ಷಗಾನವನ್ನು ಹಿಂದಿಯಲ್ಲಿ ಪ್ರದರ್ಶಿಸಲಾಗಿದೆ. ಖುದ್ದು ಮನೋಜ್ ಸಿನ್ಹ ಅವರೇ ಉತ್ಸಾಹ ಹಾಗೂ ಆಸಕ್ತಿಯಿಂದ ಪಟ್ಲರ ತಂಡಕ್ಕೆ ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ.
ಅಲ್ಲಿನ ಸರಕಾರ ಮತ್ತು ಜನರು ಕಲೆಗೆ ನೀಡುವ ಗೌರವ, ಕಲೆಯನ್ನು ಪ್ರೀತಿಸುವ ರೀತಿ ಎಲ್ಲವೂ ಮೆಚ್ಚತಕ್ಕದ್ದು. ಪಟ್ಲ ಸತೀಶ್ ಶೆಟ್ಟರ ತಂಡಕ್ಕೆ ರಾಜ್ಯ ಸರಕಾರದಿಂದಲೇ ಆತಿಥ್ಯ ನೀಡಿ, ಪ್ರತಿಯೊಬ್ಬರಿಗೂ ವಿಐಪಿ ಆದ್ಯತೆಯಲ್ಲಿ ಮಾತೆ ವೈಷ್ಣೋದೇವಿ ದರ್ಶನಕ್ಕೆ ಅವಕಾಶ ನೀಡಿರುವುದು ಮುಂತಾದವು ಇಡೀ ಕರಾವಳಿಗೆ ಹೆಮ್ಮೆಯ ಸಂಗತಿ. ಕಾಶ್ಮೀರದಲ್ಲಿ ನೀಡಿದ್ದ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿದ ರಾಜ್ಯಪಾಲರು, ವೈಷ್ನೋದೇವಿಯಲ್ಲಿ ನೀವು ಕಾರ್ಯಕ್ರಮ ನೀಡಲೇಬೇಕು ವಿಶೇಷ ಆಸಕ್ತಿ ವಹಿಸಿ ಅವಕಾಶ ನೀಡಿರುವುದು ಅವರ ಕಲಾಪ್ರೀತಿಗೆ ಸಾಕ್ಷಿ.
ಜಮ್ಮುವಿನ ವಿದ್ಯುತ್ ಸಚಿವಾಲಯದ ಪ್ರಿನ್ಸಿಪಾಲ್ ಸೆಕ್ರೆಟರಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಅ. 2ರಂದು ಪಟ್ಲರ ತಂಡ ನೀಡಿದ್ದ ಯಕ್ಷಗಾನವನ್ನು ವೀಕ್ಷಿಸಿದ್ದ ಮನೋಜ್ ಸಿನ್ಹ ಅವರು ಕರಾವಳಿಯ ಕಲೆಗೆ ಮಾರು ಹೋಗಿದ್ದರು. ಬಳಿಕ ಅವರೇ ವಿಶೇಷ ಆಸಕ್ತಿಯಿಂದ ವೈಷ್ಣೋದೇವಿಯಲ್ಲಿ ನೀವು ಪ್ರದರ್ಶನ ನೀಡಲೇಬೇಕು ಎಂದು ಪಟ್ಲರಲ್ಲಿ ಕೇಳಿಕೊಂಡಿದ್ದರು. ವೈಷ್ಣೋದೇವಿಯಲ್ಲಿ ನಡೆದಿದ್ದ ಪ್ರದರ್ಶನವನ್ನು ಅಲ್ಲಿನ ಟೂರಿಸಂ ಇಲಾಖೆಯ ಮುಖ್ಯ ಕಾರ್ಯದರ್ಶಿ ಅರುಣ್ ಮೆಹ್ತಾ ಕೂಡ ವೀಕ್ಷಿಸಿ ತಲೆದೂಗಿದ್ದರು. ಸುಮಾರು 2,000ಕ್ಕೂ ಮಿಕ್ಕಿದ ಪ್ರೇಕ್ಷಕರ ಮುಂದೆ ಹಿಂದಿ ಭಾಷೆಯಲ್ಲಿ ಪ್ರದರ್ಶನಗೊಂಡ ದೇವಿಮಹಾತ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಿಶೇಷ ಪ್ರದರ್ಶನಕ್ಕೆ ಹಿಂದಿಯಲ್ಲಿ ಸರ್ಪಂಗಳ ಈಶ್ವರ ಭಟ್ ಅವರು ಪದ್ಯ ರಚಿಸಿದ್ದು, ಪ್ರೊ. ಪವನ್ ಕಿರಣ್ಕರೆ ಅರ್ಥ ಬರೆದಿದ್ದರು. ಸತೀಶ್ ಪಟ್ಲರ ನೇತೃತ್ವದ ಪಾವಂಜೆ ಮೇಳದ 15 ಮಂದಿಯ ತಂಡ ಈ ಪ್ರದರ್ಶನವನ್ನು ನೀಡಿದೆ.