ಬೆಳ್ತಂಗಡಿ: ತಾಲೂಕಿನ ಹೆಚ್ಚಿನ ಮತಗಟ್ಟೆಗಳಲ್ಲಿ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಮತದಾನ ಶಾಂತಿಯುತವಾಗಿ ನಡೆದಿದೆ.
ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಸಿಬ್ಬಂದಿಗೆ ಮಂಗಳವಾರ ಸಂಜೆಯಿಂದ ರಾತ್ರಿ 11ವರೆಗೂ ಸುರಿದ ಮಳೆ ಸಮಸ್ಯೆ ನೀಡಿತು.
ಗುಡುಗು ಸಹಿತ ಸುರಿದ ಮಳೆಯ ಕಾರಣ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದು ಚುನಾವಣಾ ಸಿಬ್ಬಂದಿ ಪರದಾಡುವಂತಾಯಿತು. ಚುನಾವಣೆ ಕೇಂದ್ರದಲ್ಲಿ ಬೆಳಕಿನ ವ್ಯವಸ್ಥೆಗೆ ಕ್ಯಾಂಡಲ್, ಕೆಲವೆಡೆ ಜನರೇಟರ್, ಇನ್ವರ್ಟರ್ ಅವಲಂಬಿಸಿ ಪೂರ್ವ ತಯಾರಿ ನಡೆಸಲಾಯಿತು.
ಮೆಸ್ಕಾಂ ಸಿಬ್ಬಂದಿ ಹೆಚ್ಚಿನ ಶ್ರಮವಹಿಸಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿದರು ಗುಡುಗು,ಸಿಡಿಲಿನ ಕಾರಣ ವಿದ್ಯುತ್ ಪೂರೈಕೆ ಆಗಾಗ ಕೈ ಕೊಡುತ್ತಿತ್ತು. ಬುಧವಾರ ಸಂಜೆ ಮಲವಂತಿಗೆ ಮಿತ್ತಬಾಗಿಲು,ಕಲ್ಮಂಜ, ಬೆಳಾಲು,ಬೆಳ್ತಂಗಡಿ ಲಾಯಿಲ, ಧರ್ಮಸ್ಥಳ, ಕನ್ಯಾಡಿ,ಶಿರ್ಲಾಲು, ಸವಣಾಲು ಮೊದಲಾದ ಕಡೆಗಳಲ್ಲಿ ಗುಡುಗು,ಸಹಿತ ಮಳೆ ಸಂಜೆ 3.30 ರಿಂದ ಆರಂಭವಾಯಿತು. ಈ ವೇಳೆ ಮತ್ತೆ ವಿದ್ಯುತ್ ಮಾಯವಾಗಿ ಮೋಡ ಕವಿದ ಕತ್ತಲಿನ ವಾತಾವರಣದಲ್ಲಿ ಬೆಳಕಿನ ಅಭಾವ ಉಂಟಾಗಿ ಮತದಾರರು ಮತ ಚಲಾಯಿಸಲು ಪರದಾಟ ನಡೆಸುವುದು ಕಂಡುಬಂತು.
ಚಾರ್ಮಾಡಿ ಕೈಕೊಟ್ಟ ಮತಯಂತ್ರ:
ಚಾರ್ಮಾಡಿ ಗ್ರಾಮದ 21ನೇ ಮತದಾನ ಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಮತದಾನ ಆರಂಭಕ್ಕೆ ಸುಮಾರು ಮೂರು ತಾಸು ತೊಂದರೆಯಾಯಿತು. ಇದರಿಂದ ಕೆಲವು ಮತದಾರರು ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿ ಮನೆಗಳಿಗೆ ವಾಪಾಸಾಗಿ ಮತಯಂತ್ರ ದುರಸ್ತಿಯಾದ ಬಳಿಕ ಮತ್ತೆ ಮತಗಟ್ಟೆಗಳಿಗೆ ಆಗಮಿಸಿದರು. ಈ ವೇಳೆ ಮತ್ತೆ ಉದ್ದದ ಸರತಿ ಸಾಲು ಕಂಡು ಬಂತು. ಇಲ್ಲಿನ ಇನ್ನೊಂದು ಬೂತ್ ನಲ್ಲೂ ಮತಯಂತ್ರ ಕೆಲವು ಸಮಯ ಕೈ ಕೊಟ್ಟಿತು. ಮತಯಂತ್ರಗಳು ದುರಸ್ತಿಯಾದ ಬಳಿಕವು ತ್ವರಿತವಾಗಿ ಕಾರ್ಯನಿರ್ವಹಿಸದೆ ಮತದಾನ ಪ್ರಕ್ರಿಯೆ ವಿಳಂಬವಾಗಿ ಜನರು ತಮ್ಮ ಹಕ್ಕನ್ನು ಚಲಾಯಿಸಲು ಹಲವು ಸಮಯ ಕಾಯಬೇಕಾಯಿತು.
ಟ್ರಾಫಿಕ್ ಜಾಮ್
ಚಾರ್ಮಾಡಿ ಮತಗಟ್ಟೆ ರಾಷ್ಟ್ರೀಯ ಹೆದ್ದಾರಿ ಬದಿ ಹಾಗೂ ಪೊಲೀಸ್ ಚೆಕ್ ಪೋಸ್ಟ್ ಸಮೀಪದಲ್ಲಿ ಇದೆ.ಪಕ್ಷಗಳ ಕಾರ್ಯಕರ್ತರು ಬೇರೆ ಜಾಗ ಇಲ್ಲದ ಕಾರಣ ತಮ್ಮ ಬೂತ್ ಗಳನ್ನು ರಸ್ತೆ ಬದಿಯೇ ನಿರ್ಮಿಸಿ ಮತದಾರರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದ ಕಾರಣ, ಅಲ್ಲಲ್ಲಿ ವಾಹನ ಪಾರ್ಕಿಂಗ್ ಹಾಗೂ ಅಗಲ ಕಿರಿದಾಗ ಈ ರಸ್ತೆಯಲ್ಲಿ ವಿಪರೀತ ವಾಹನ ಓಡಾಟವಿದ್ದು ಹಲವು ಬಾರಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು ಹಾಗೂ ಮತದಾರರು ಸಮಸ್ಯೆ ಎದುರಿಸಿದರು.
ಅರಣ್ಯ ಇಲಾಖೆಯ ವಿಶೇಷ ತಂಡ.
ಬೆಳ್ತಂಗಡಿ ಅರಣ್ಯ ಇಲಾಖೆಯ ವತಿಯಿಂದ ಆನೆ ಬಾಧಿತ ಪ್ರದೇಶಗಳಾದ ಮಲವಂತಿಗೆ, ಕಡಿರುದ್ಯಾವರ, ಚಾರ್ಮಾಡಿ ಗ್ರಾಮಗಳ ಆರು ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ಕಾರ್ಯವನ್ನು ಕೈಗೊಳ್ಳಲಾಯಿತು. ಆರ್ ಎಫ್ ಒ ತ್ಯಾಗರಾಜ್ ನಿರ್ದೇಶನದಲ್ಲಿ ಡಿ ಆರ್ ಎಫ್ ಒಗಳಾದ ಹರಿಪ್ರಸಾದ್ ಹಾಗೂ ರಾಜೇಶ್ ಎಸ್, ಗಸ್ತು ಅರಣ್ಯ ಪಾಲಕರಾದ ಶರತ್ ಶೆಟ್ಟಿ, ಸಂತೋಷ್,ಚಾಲಕ ಕುಶಾಲಪ್ಪ ಅಹರ್ನಿಶಿ ಗಸ್ತು ಕಾರ್ಯಾಚರಣೆ ನಡೆಸಿದರು.
ಮಂಗಳವಾರ ತಡರಾತ್ರಿ ಚಾರ್ಮಾಡಿ ಘಾಟಿಯ ಎರಡನೇ ಹಾಗೂ ಮೂರನೇ ತಿರುವಿನ ಮಧ್ಯೆ ರಸ್ತೆ ಬದಿಯಲ್ಲಿ ಕಾಡಾನೆ ಕಂಡುಬಂದಿದ್ದು, ಈ ತಂಡವು ಅಲ್ಲಿಗೆ ತೆರಳಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಸಿಡಿಸುವ ಮೂಲಕ ಕಾಡಾನೆಯನ್ನು ಅರಣ್ಯದ ಕಡೆ ಓಡಿಸಿತು. ಬುಧವಾರವು ತಂಡ ಘಾಟಿ ಪರಿಸರದಲ್ಲಿ ಗಸ್ತು ಕೈಗೊಂಡಿತು.