News Karnataka Kannada
Monday, April 29 2024
ಮಂಗಳೂರು

ಅಣ್ಣನ ಜೀವ ಉಳಿಸುವುದಕ್ಕೆ ಬಾಯಿಯಿಂದ ಹಾವಿನ ವಿಷ ಹೀರಿದ ತಮ್ಮ

Brother sucks poison from his mouth to save brother's life
Photo Credit : News Kannada

ಕೊಕ್ಕಡ: ಇಂದು ಸಮಾಜದಲ್ಲಿ ಆಸ್ತಿ ಸೇರಿದಂತೆ ಬೇರೆ, ಬೇರೆ ವಿಷಯಗಳಲ್ಲಿ ಅಣ್ಣ-ತಮ್ಮಂದಿರ ನಡುವೆ ಜಗಳವಾಗಿ ಕುಟುಂಬಗಳು ಬೀದಿಗೆ ಬರುವ ಸುದ್ದಿಗಳನ್ನು ಕಾಣುತ್ತೇವೆ. ಆದರೆ ತನ್ನ ಅಣ್ಣನಿಗೆ ಕಾಡಿನಲ್ಲಿ ವಿಷದ ಹಾವು ಕಚ್ಚಿ, ತೀವ್ರ ಅಸ್ವಸ್ಥ್ಯಗೊಂಡದ್ದನ್ನು ಕಂಡ, ತಮ್ಮ ತನ್ನ ಜೀವದ ಹಂಗು ತೊರೆದು ಬಾಯಿಯಿಂದ ವಿಷವನ್ನು ಹೀರಿ, ಕಾಡಿನಿಂದ ಅಣ್ಣನ್ನು ಹೊತ್ತುಕೊಂಡು ಬಂದು, ಚಿಕಿತ್ಸೆ ಕೊಡಿಸಿ ಬದುಕಿಸಿದ ವಿಶೇಷ ಪ್ರಕರಣ ಕೊಕ್ಕಡ ಗ್ರಾಮದ ಮುಂಡೂರುಪಲ್ಕೆಯಲ್ಲಿ ನಡೆದಿದೆ.

ಕೊಕ್ಕಡ ಗ್ರಾಮದ ಮುಂಡೂರುಪಲ್ಕೆ ಕುರ್ಲೆ ನಿವಾಸಿ ತಿಮ್ಮಯ್ಯ ಮಲೆಕುಡಿಯ ಮತ್ತು ಸುಧಾ ಇವರ ಪುತ್ರ ಗಣೇಶ್ ಕೆ. ಅಣ್ಣನನ್ನು ಬದುಕಿಸಿ ಮಾನವೀಯತೆ ಮರೆದವರರಾಗಿದ್ದಾರೆ. ಇವರ ಅಣ್ಣ ಸಂತೋಷ್ (25ವ) ಹಾವು ಕಚ್ಚಿ ವಿಷವೇರಿದರೂ, ತಮ್ಮನ ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಬದುಕುಳಿದಿದ್ದು, ಈಗ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಹಿನ್ನಲೆ: ಮುಂಡೂರುಪಲ್ಕೆ ನಿವಾಸಿ ಗಣೇಶ್ ಕೆ. ಅವರು ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಸಿಸಿ ಕ್ಯಾಡೆಟ್‌ನ ವಿದ್ಯಾರ್ಥಿಯಾಗಿ, ಪದವಿ ಪಡೆದ ಬಳಿಕ ಉಜಿರೆ ರುಡ್‌ಸೆಟ್‌ನಲ್ಲಿ ಜೇನುಕೃಷಿ ತರಬೇತಿಯನ್ನು ಪಡೆದು ಜೇನುಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಜೇನು ಪೆಟ್ಟಿಗೆಗೆ ಸ್ಥಳೀಯ ಕಾಡಿನಲ್ಲಿ ಜೇನು ಕಟುಂಬವನ್ನು ಹುಡುಕಿ ಪೆಟ್ಟಿಗೆಯಲ್ಲಿ ಕೂರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೇ 30ರಂದು ಅಣ್ಣ ಸಂತೋಷ್ ಹಾಗೂ ತಮ್ಮ ಗಣೇಶ್ ಕೆ. ಅವರು ತಮ್ಮ ಮನೆಯ ಸಮೀಪದ ಕಾಡಿಗೆ ಜೇನು ಕುಟುಂಬ ಹುಡುಕಾಟಕ್ಕೆ ತೆರಳಿದ್ದರು. ಕಾಡಿನಲ್ಲಿ ಸುಮಾರು ಎರಡೂವರೆ ಕಿ.ಮೀ ದೂರ ಸಾಗಿದ್ದರು. ದಟ್ಟವಾದ ಕಾಡಿನಲ್ಲಿ ಪೊದೆ, ಗಿಡಗಳನ್ನು ಸರಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಾಡಿನ ಮಧ್ಯೆ ಅಣ್ಣ ಸಂತೋಷ್ ಅವರಿಗೆ ಗಿಡವೊಂದರಲ್ಲಿದ್ದ ವಿಷಪೂರಿತ ಮಲಬಾರ್ ಗುಳಿ ಮಂಡಲ(ಮಲಬಾರ್ ಪಿಟ್ ವೈಪರ್) ಹಾವು ಕೈ ಬೆರಳಿಗೆ ಕಚ್ಚಿತ್ತು.

ಸ್ವಲ್ಪ ಸಮಯದಲ್ಲೇ ಅವರು ವಿಷವೇರಿ ತೀವ್ರ ಅಸ್ವಸ್ಥಗೊಂಡರು. ತಮ್ಮ ಗಣೇಶ್ ಅವರಿಗೆ ಈ ವಿಷಯ ಗೊತ್ತಾಗುತ್ತಲೇ, ತಕ್ಷಣ ಹಾವು ಕಚ್ಚಿದ ಜಾಗದ ಮೇಲೆ ಕೈಗೆ ಬಟ್ಟೆ ಕಟ್ಟಿದರು. ಹಾವು ಕಚ್ಚಿ ಗಾಯಗೊಂಡ ಅಣ್ಣನ ಬೆರಳಿನ ಜಾಗವನ್ನು ಬಾಯಿಯಿಂದ ಹೀರಿ ಹಾವಿನ ವಿಷವನ್ನು ಮೂರು, ನಾಲ್ಕು ಬಾರಿ ತೆಗೆದು ಪ್ರಥಮ ಚಿಕಿತ್ಸೆ ನೀಡಿದರು.

ನಿತ್ರಾಣಗೊಂಡು ನಡೆದು ಬರಲು ಸಾಧ್ಯವಾಗದೆ ಕುಸಿದು ಬಿದ್ದಿದ್ದ ಅಣ್ಣನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸುಮಾರು ಎರಡೂವರೆ ಕಿ.ಮೀ ಕಾಡಿನಲ್ಲಿ ನಡೆದು ಬಂದ ಗಣೇಶ್ ಕೆ. ಅವರು ತಮ್ಮ ಮನೆಯವರಿಗೆ ವಿಷಯ ತಿಳಿಸಿ, ನಂತರ ನಾಟಿವೈದ್ಯರಿಂದ ಚಿಕಿತ್ಸೆ ಕೊಡಿಸಿದರು.

ಸಂತೋಷ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಗಣೇಶ್ ಅವರ ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಅಣ್ಣ ಸಂತೋಷ್ ಅವರ ಜೀವ ಉಳಿದಿದೆ, ಗಣೇಶ್ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಇನ್ನೋರ್ವ ಸಹೋದರ ವಿಠಲ ಕುರ್ಲೆ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿತ್ತು:
ನಾನು ಜೇನು ಸಾಕಾಣೆ ಮಾಡುತ್ತಿದ್ದು, ಜೇನು ಕುಟುಂಬಕ್ಕಾಗಿ ಅಣ್ಣನ ಜೊತೆ ಕಾಡಿಗೆ ಹೋಗಿದ್ದೆವು. ಅಣ್ಣನಿಗೆ ಹಾವು ಕಚ್ಚಿದ ವಿಷಯ ತಿಳಿದ ಕೂಡಲೇ, ಹಾವು ಕಚ್ಚಿದ ಜಾಗದ ಮೇಲ್ಗಡೆ ಕೈಗೆ ಬಟ್ಟೆ ಕಟ್ಟಿ, ಬಾಯಿಯಿಂದ ವಿಷವನ್ನು ಹೀರಿ ಹೊರಗೆ ತೆಗೆದಿದ್ದೆ. ನಾಲ್ಕೈದು ಸಲ ಹೀಗೆ ಮಾಡಿದ್ದೆ. ವಿಷ ತೆಗೆದ ಬಳಿಕ ನನ್ನ ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿತ್ತು. ಬಾರಿ ಜಾಗ್ರತೆಯಿಂದ ವಿಷ ಹೀರಿದ್ದರಿಂದ ಅಪಾಯವಾಗಿಲ್ಲ, ನಂತರ ಬಾಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿದೆ.

ಗಣೇಶ್ ಕೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು