ಬೆಳ್ತಂಗಡಿ: ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಖ್ಯಾತಿ ಹೊಂದಿರುವ ವಿದುಷಿ ಸುಚಿತ್ರ ಹೊಳ್ಳ ಅವರು “ವಾಣಿಜ್ಯ ಶಾಸ್ತ್ರದಲ್ಲಿ ಮಾರುಕಟ್ಟೆ- ಕೃಷಿ ಬದುಕು ” ವಿಷಯದ ಬಗೆಗೆ ಅಧ್ಯಯನ ನಡೆಸಿ ಸಲ್ಲಿಸಿದ ಮಹಾಪ್ರಬಂಧವನ್ನು ಮನ್ನಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.
ಡಾ! ಸುಚಿತ್ರ ಹೊಳ್ಳ ಅವರು ಈ ಅಧ್ಯಯನವನ್ನು ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ!ಎಚ್.ಡಿ.ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಕೈಗೊಂಡಿದ್ದರು. ಇತ್ತೀಚಿಗೆ ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಘಟಿಕೋತ್ಸವ “ನುಡಿಹಬ್ಬ-31 “ರಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಕರ್ನಾಟಕ ದ ಸುಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ, ವಿದುಷಿ ಸುಚಿತ್ರಾ ಹೊಳ್ಳ ಕರಾವಳಿ ಕರ್ನಾಟಕದ ಸುಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿಯರಲ್ಲಿ ಓರ್ವರು.
ಅವರು ಉಜಿರೆಯ ಕಲಾಸಕ್ತ ಕುಟುಂಬದಲ್ಲಿ ಜನಿಸಿ ಬಾಲಪ್ರತಿಭೆಯಾಗಿ ಬೆಳಕಿಗೆ ಬಂದು ಇಂದು ಪ್ರಬುದ್ಧ ಕಲಾವಿದೆಯಾಗಿ ನಾಡಿನೆಲ್ಲೆಡೆ ಹೆಸರು ಗಳಿಸಿರುವರು. ಸಂಗೀತ,ಹಾಡುಗಾರಿಕೆ ಇವರಿಗೆ ರಕ್ತಗತವಾಗಿ ಬಂದಿದ್ದು,ಅಜ್ಜಿ ಸರಸ್ವತಿಯಮ್ಮ ಹಸೆ ಹಾಡು -ಶೋಭಾನೆ ಹಾಡುಗಳನ್ನು ಹೇಳುತ್ತಾ ಮನೆಮಾತಾದವರು . ತಂದೆ ವೇದಮೂರ್ತಿ ಶ್ರೀನಿವಾಸ ಹೊಳ್ಳರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕರಾಗಿ,ಹವ್ಯಾಸಿ ಯಕ್ಷಗಾನ ಭಾಗವತರಾಗಿ ಹೆಸರು ಪಡೆದವರು. ತಾಯಿ ಮೂಕಾಂಬಿಕಾ ಹೊಳ್ಳ ಅವರೂ ಸಂಗೀತ,ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
ವಿದ್ವತ್,ಎಂ ಮ್ಯೂಸಿಕ್ ಪದವಿಯಲ್ಲಿ ಪ್ರಥಮ ರಾಂಕ್ ಪಡೆದ ಅವರು ತನ್ನ 7ನೇ ವರ್ಷದಲ್ಲಿ ಪ್ರಥಮ ಸಂಗೀತ ಕಚೇರಿ ನೀಡಿ, ಅವರು ಸಂಗೀತ ಪ್ರಸಾರಕ್ಕಾಗಿ ಪುತ್ತೂರಿನಲ್ಲಿ ಸಾಧನ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಅದರ ಗುರುಗಳಾಗಿ ಯುವ ಗಾಯಕರನ್ನು ಸೃಷ್ಟಿಸಿದ್ದಾರೆ. ವಕೀಲೆಯಾಗಿ ಸೇವೆ ಸಲ್ಲಿಸಿರುವ ಅವರು ಸಂದೇಶ ಲಲಿತ ಕಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಡಿನೆಲ್ಲೆಡೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾದ ಅವರು ಉದ್ಯಮಿ ಹರೀಶ್ ಹೊಳ್ಳ ಅವರನ್ನು ವಿವಾಹವಾಗಿ ಪುತ್ರ ತೇಜ ಚಿನ್ಮಯ ಹೊಳ್ಳ ರೊಂದಿಗೆ ಪುತ್ತೂರು ಕೊಂಬೆಟ್ಟುನಲ್ಲಿ ನೆಲೆಸಿರುತ್ತಾರೆ.