ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಎಂಬಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಬ್ರಾಹ್ಮಣ ಸಭಾ(ರಿ) ವತಿಯಿಂದ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿ ಸುಮಾರು ರೂ 1.60 ಕೋಟಿ ವೆಚ್ಚದಿಂದ ನೂತನವಾಗಿ ನಿರ್ಮಾಣಗೊಂಡ “ಹರಿಹರಾನುಗ್ರಹ “ಸಭಾಭವನವನ್ನು ಅ. 28 ರಂದು ಪೂರ್ವಾಹ್ನ ಸುಬ್ರಹಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಿದ್ದಾರೆ.
ವಿವಿಧ ವಲಯಗಳ ತುಳು ಶಿವಳ್ಳಿ ಸಮಾಜ ಬಾಂಧವರ ಹಾಗೂ ದಾನಿಗಳ ಸಹಾಯ ,ಸಹಕಾರದಿಂದ ಸಭಾಭವನದ ಬಹುಕಾಲದ ಕನಸು ನನಸಾಗುತ್ತಿದೆ. ಕಟ್ಟಡ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರ ಶುಭ ಹಾರೈಕೆಯೊಂದಿಗೆ ಗೌರವಾಧ್ಯಕ್ಷ ವಿಜಯರಾಘವ ಪಡುವೆಟ್ನಾಯರಿಂದ ಶಿಲಾನ್ಯಾಸಗೊಂಡ ಸಭಾಭವನ ಅತ್ಯಲ್ಪ ಅವಧಿಯಲ್ಲಿ ಸುಂದರವಾಗಿ ನಿರ್ಮಾಣಗೊಂಡು ಸಾರ್ವಜನಿಕ ಸಭೆ ,ಸಮಾರಂಭ , ಶುಭಕಾರ್ಯಗಳಿಗೆ ಲಭ್ಯವಾಗಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಶರತ್ ಕೃಷ್ಣಪಡುವೆಟ್ನಾಯ ಮತ್ತು ತಾ!ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಅಸ್ರಣ್ಣ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದು ,ಬೆಂಗಳೂರಿನ ಎ .ಎಂ. ಎಸ್ .ಲಿಮಿಟೆಡ್ ನ ಆಡಳಿತ ನಿರ್ದೇಶಕ ಪಿ.ರಾಮದಾಸ್ ಮಡ್ಮಣ್ಣಾಯ ,ಮೂಡಬಿದ್ರಿ ಧನಲಕ್ಷ್ಮೀ ಕ್ಯಾಶ್ಯು ಇಂಡಸ್ಟ್ರೀಸ್ ನ ಮಾಲಕ ಶ್ರೀಪತಿ ಭಟ್ ಮತ್ತು ದ .ಕ. ಜಿಲ್ಲಾ ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ,ಖ್ಯಾತ ದಂತ ವೈದ್ಯ ಡಾ! ಎಂ.ಎಂ.ದಯಾಕರ್ ಗೌರವ ಉಪಸ್ಥಿತರಿರುವರು.
ನೂತನ ಸಭಾಭವನ ಲೋಕಾರ್ಪಣೆ ಪ್ರಯುಕ್ತ ಅ 26 ರಂದು ತುಳು ಶಿವಳ್ಳಿ ಸಮಾಜದ ವಿವಿಧ ವಲಯಗಳಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಅ. 27 ರಂದು ಸಂಜೆ ವೇದಮೂರ್ತಿ ರಾಮಕೃಷ್ಣ ಕಲ್ಲೂರಾಯ ಮತ್ತು ವೈದಿಕ ವೃಂದದವರಿಂದ ಪುಣ್ಯಾಹವಾಚನ,ಪ್ರಾಸಾದ ಶುದ್ಧಿ,ವಾಸ್ತುಹೋಮ ,ವಾಸ್ತುಬಲಿ ,ಸುದರ್ಶನ ಹೋಮ ಹಾಗೂ ಆಶ್ಲೇಷಾ ಬಲಿ ಧಾರ್ಮಿಕ ಕಾರ್ಯಕ್ರಮಗಳೂ ,ಅ .28 ರಂದು ಬೆಳಿಗ್ಗೆ ಗಣ ಯಾಗ ಹಾಗೂ ಶ್ರೀ ಚಂಡಿಕಾ ಯಾಗ ನಡೆಯಲಿದೆ. ಮದ್ಯಾಹ್ನ ಸಮಾಜದ ಕಲಾವಿದರಿಂದ ತುಳು ಶಿವಳ್ಳಿ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತಾಲೂಕಿನ ಸಮಾಜ ಬಾಂಧವರ ಸರ್ವ ರೀತಿಯ ಸಹಕಾರವನ್ನು ಕೋರುತ್ತೇವೆ ಎಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.