ಬೆಳ್ತಂಗಡಿ: ಸಾಮರಸ್ಯದ ಬಾಳನ್ನು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನದಿಂದ ಭೇದ ಅಳಿಸಬಹುದು. ನಿಮ್ಮೆಲ್ಲರ ಅಂತಃಕರಣ ಪ್ರೀತಿ ವಿಶ್ವಾಸದಿಂದ ನನ್ನ ಉತ್ಸಾಹ ದುಪ್ಪಟ್ಟಾಗಿದೆ ಎಂದು ಧರ್ಮಾಧಿಕಾರಿ, ರಾಜಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶನಿವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ 10 ನೇ ವರ್ಷದ ಪಾದಯಾತ್ರೆಯ ಯಾತ್ರಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಪಾದಯಾತ್ರೆಯು ಪ್ರತೀ ವರ್ಷ ವಿಶೇಷತೆಯಿಂದ ಕೂಡಿರುವುದು ಸಂತಸ ತಂದಿದೆ. ಸಮಸ್ಯೆಗಳು ಬಂದಾಗ ಬೆನ್ನು ತೋರಿಸದೆ ಎದುರಿಸಿ ರುವುದರಿಂದ ಮತ್ತು ನನ್ನ ಗುರಿ ಉದ್ಧೇಶ ಸ್ಪಷ್ಟವಾಗಿದ್ದರಿಂದ ಅದು ನನ್ನನ್ನು ರಾಜ್ಯಸಭಾ ಸದಸ್ಯತ್ವದವರೆಗೆ ತಂದು ನಿಲ್ಲಿಸಿದೆ. ಇದು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವೇ ಆಗಿದೆ ಎಂದರು.
ಸಹಬಾಳ್ವೆ, ಸಾಮರಸ್ಯ, ಸಹಜೀವನಕ್ಕೆ ಕ್ಷೇತ್ರದ ಆಡಳಿತ ಪ್ರಾಶಸ್ತ್ಯ ಕೊಟ್ಟಿದೆ. ಇಲ್ಲಿ ಭಕ್ತರೊಳಗೆ ಭೇದ ಮಾಡುವ ಪ್ರಶ್ನೆಯೇ ಉದ್ಭವಿಸದು. ಒತ್ತಡಗಳು ಸ್ವಾಭಾವಿಕವಾಗಿ ಬಂದಿವೆ. ಅದನ್ನು ಸ್ವಾಭಾವಿಕವಾಗಿಯೇ ಎದುರಿಸಿದ್ದೇನೆ ಎಂದರು.
ಸಮಾಜದಲ್ಲಿನ ಬಡತನ ಹೋಗಲಾಡಿಸಲು ಗ್ರಾಮಾಭಿವೃದ್ಧಿ ಯೋಜನೆ, ಆಪತ್ತು ನಿರ್ವಹಣೆ ಮಾಡಲು ಶೌರ್ಯ ತಂಡ ಮೊದಲಾದ ಸೇವೆ ಮಾಡುವ ಅವಕಾಶ ನಮ್ಮದಾಗಿದೆ. ಇದೆಲ್ಲವೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಶ್ರದ್ಧೆ ಯ ಫಲ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು, ಸತ್ಯಮೇವ ಜಯತೆ ಎಂದ ವಾಕ್ಯ ಕ್ಷೇತ್ರದಲ್ಲಿ ನಿಜವಾಗಿದೆ. ಒಂದು ತಾಲೂಕಿನಲ್ಲಿ ನಾಲ್ಕು ಮಂದಿ ಜನಪ್ರತಿನಿಧಿಗಳು ಇರುವುದು ದೇಶದಲ್ಲೇ ಇದೇ ಮೊದಲು ಇರಬೇಕು. ಇದು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವೇ ಆಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಸಾತ್ವಿಕ ಶಕ್ತಿಗೆ ವೀಶೇಷ ಚೈತನ್ಯವಿದೆ ಎಂದು ಹತ್ತು ವರ್ಷ ನಡೆದ ಪಾದಯಾತ್ರೆ ತೋರಿಸಿಕೊಟ್ಟಿದೆ ಎಂದ ಅವರು, ಹತ್ತನೇ ಪಾದಯತ್ರೆ ಒಂದೆಡೆಯಾದರೆ, ಇನ್ನೊಂದೆಡೆ ಹೆಗ್ಗಡೆಯವರಿಗೆ ರಾಜ್ಯಸಭಾ ಸದಸ್ಯತ್ವ ದೊರಕಿರುವುದು, ಮತ್ತೊಂದೆಡೆ ಹೆಗ್ಗಡೆ ದಂಪತಿಯ ವೈವಾಹಿಕ ಜೀವನದ ಐವತ್ತನೇ ವರ್ಷದ ಸಂಭ್ರಮ, ಮಗದೊಂದೆಡೆ ಹೆಗ್ಗಡೆಯವರು ಎಪ್ಪತ್ತೈದನೇ ವರ್ಷಕ್ಕೆ ಪ್ರವೇಶಿಸುತ್ತಿರುವುದು ನಮ್ನೆಲ್ಲರ ಸಂಭ್ರಮವನ್ನು ಹೆಚ್ಚಿಸಿದೆ ಎಂದರು.
ಡಾ.ಹೇಮಾವತಿ ವೀ.ಹೆಗ್ಗಡೆ,ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತೆ ಮೊಕ್ತೇಸರ ಶರತ್ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ ಸ್ವಾಗತಿಸಿ, ಪ್ರಸ್ತಾವಿಸುತ್ತಾ, ಇಂದಿನ ಪಾದಯಾತ್ರೆ ವಿಶೇಷ ಶಕ್ತಿ ಸಂಭ್ರಮವನ್ನು ತಂದು ಕೊಟ್ಟಿದೆ ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಅನಿಲ್ಕುಮಾರ್ ವಂದಿಸಿದರು.ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮೊದಲು ವೇದಿಕೆಯಲ್ಲಿ ಭಗವಾನ್ ಶಿರಡಿಬಾಬಾ ಸತ್ಯಸಾಯಿ ಸೇವಾ ಕ್ಷೇತ್ರದ ಹಳೇಕೊಟೆ, ಬೆಳ್ತಂಗಡಿ ತಂಡದವರಿಂದ ಭಜನಾ ಸತ್ಸಂಗ ನೆರವೇರಿತು.