ಬೆಳ್ತಂಗಡಿ: ಬೇರೆಯವರ ಅಭಿಪ್ರಾಯದ ಜೊತೆಗೆ ಸಮತೋಲನ ಸಾಧಿಸಿ ಸಮಾಜ ಕಟ್ಟುವ ಕೆಲಸ ನಡೆಯಬೇಕೇ ಹೊರತು ನಾವು ನಡೆದದ್ದೇ ದಾರಿ ಎಂಬಂತಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಜೇಸೀ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗದಂತೆ ಸಮಾಜದ ನಾಲ್ಕನೇ ಸ್ತಂಭವೆಂದು ಗುರುತಿಸಲ್ಪಡುವ ಪತ್ರಿಕಾ ರಂಗವು ಸಮಾಜದ ಆಶಯವನ್ನು ಜಾಗೃತಿಯಲ್ಲಿಡುವ ಕಾರ್ಯ ಮಾಡುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಾಗ ಅದನ್ನು ನಿರ್ಭೀತಿಯಿಂದ ಎಚ್ಚರಿಸುವ ಕಾರ್ಯವನ್ನು ಪತ್ರಿಕೆಗಳು ಮಾಡಿವೆ ಎಂದರು.
ಭಾರತೀಯ ಮೌಲ್ಯಗಳು ಸದಾಕಾಲವೂ ಉಳಿಯುವ ಹಾಗೆ, ಶಾಶ್ವತ ಸತ್ಯಗಳನ್ನೇ ಅರಿತು ನಮ್ಮ ಸಂವಿಧಾನ ರಚನೆಯಾಗಿದೆ. ಎಲ್ಲಾ ರೀತಿಯ ಭಾವನೆ, ಅಭಿಪ್ರಾಯಗಳಿಗೆ ಅವಕಾಶ ಸಮಾಜದಲ್ಲಿ ಇರಬೇಕು. ಸಹಬಾಳ್ವೆ, ಸಹಮತ ಇಟ್ಟುಕೊಂಡು ಸಮಾಜದ ಹಿತಕ್ಕಾಗಿ ನಾವು ಹೆಜ್ಜೆ ಇಡುತ್ತಾಹೋಗಬೇಕು. ಬದುಕುವ ಹಕ್ಕು ಎಲ್ಲರಿಗೂ ಇದೆ. ಜೀವ ತೆಗೆಯುವ ಮಟ್ಟಕ್ಕೆ ಯಾರೂ ಇಳಿಯಬಾರದು. ಚಾರಿತ್ರ್ಯ ಹನನ ಆಗದಂತೆ ಎಚ್ಚರದಿಂದ ಇರಬೇಕು ಎಂದರು.
ಅತಿಥಿಯಾಗಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು, ಕೊರೋನಾ ಕಾಲದ ನಂತರ ಇಂದು ಪತ್ರಕರ್ತರ ಜೀವನ ಸಂತಸದಲ್ಲಿ ಇಲ್ಲಾ. ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಪಡುವ ಪತ್ರಕರ್ತರು ತಾವೇ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕೇವಲ ಪತ್ರಿಕೆಯನ್ನೇ ನೆಚ್ಚಿಕೊಂಡು ಬದುಕಲು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಪತ್ರಕರ್ತರಿಗಾಗಿ ಸ್ವ ಉದ್ಯೋಗದ ತರಬೇತಿ ನೀಡಲು ಜಿಲ್ಲಾ ಸಂಘ ಉದ್ಯುಕ್ತವಾಗಿದೆ ಎಂದರು.
ತಾಲೂಕು ಕೇಂದ್ರಗಳಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ಸಹಕಾರ, ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ, ಪ್ಲಾಸ್ಟಿಕ ಬಳಕೆಯ ವಿರುದ್ಧ ಜಾಗೃತಿಯಂತಹ ಕಾರ್ಯಗಳು ಜಿಲ್ಲಾ ಸಂಘದಿಂದ ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಗಣೇಶ ಶಿರ್ಲಾಲು ಅವರು, ಸಂಘದ ಕಚೇರಿಗಾಗಿ ನಿವೇಶನ ಹಾಗೂ ಕಟ್ಟಡ ರಚನೆಯನ್ನು ತಾಲೂಕಿನ ಮೂವರು ಶಾಸಕರುಗಳ ಸಹಕಾರದೊಂದಿಗೆ ಚುನಾವಣೆಯ ಮೊದಲು ಕೈಗೆತ್ತಿಕೊಳ್ಳಲಾಗುವುದು ಎಂದರು.
ಪತ್ರಕರ್ತ ಮನೋಹರ ಬಳಂಜ ಅವರ ಪುತ್ರಿಯ ಸ್ಮರಣಾರ್ಥ ಬಡಕುಟುಂಬದ ಚಿಕಿತ್ಸಾ ವೆಚ್ಚಕ್ಕಾಗಿ ಕೊಡಲ್ಪಡುವ ಐದನೇ ವರ್ಷದ ದಿತಿ ಸಾಂತ್ವನ ನಿಧಿಯನ್ನು 6 ಮಂದಿಗೆ ಅತಿಥಿಗಳು ಹಸ್ತಾಂತರಿಸಿದರು.
ಸಂಘದ ಕಾರ್ಯದರ್ಶಿ ಚೈತ್ರೇಶ್ ಇಳಂತಿಲ ಸ್ವಾಗತಿಸಿದರು. ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ವಂದಿಸಿದರು. ಸದಸ್ಯ ಅಚುಶ್ರೀ ಬಾಂಗೇರು ನಿರ್ವಹಿಸಿದರು.