ಬೆಳ್ತಂಗಡಿ: ಗೋಶಾಲೆಯ ಮೂಲಕ ಹೈನುಗಾರರಿಗೆ ಹಾಗೂ ಕೃಷಿಕರಿಗೆ ದೇಶೀ ಗೋತಳಿಗಳ ಬಗ್ಗೆ ಜಾಗೃತಿ ಮೂಡಿಸಿ, ಅವುಗಳನ್ನು ಸಾಕುವಂತೆ ಉತ್ತೇಜಿಸುವ ಕೆಲಸ ಕಳೆಂಜ ಕಾಯರ್ತಡ್ಕದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ಕಳೆದ ೩ ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕಳೆಂಜ ಕಾಯರ್ತಡ್ಕದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ಡಿ.೨೫ರಂದು ನಡೆಯುವ ಸಾಮೂಹಿಕ ಗೋಪೂಜೆಯೊಂದಿಗೆ ನಂದಗೋಕುಲ ದೀಪೋತ್ಸವ ಪ್ರಯುಕ್ತ ಡಿ.೧೯ರಂದು ತಾಲೂಕಿನ ಗ್ರಾಮಗಳಿಂದ ನೀಡಿದ ಗೋಗ್ರಾಸ ಹೊರೆಕಾಣಿಕೆಗೆ ವಾಣಿ ಹಳೆಕೋಟೆ ಸಮೀಪದಿಂದ ಚಾಲನೆ ನೀಡಿ ಮಾತನಾಡಿದರು.
ಇದೊಂದು ಇತಿಹಾಸದಲ್ಲಿ ನೆನಪುಳಿಯುವ ಕಾರ್ಯಕ್ರಮವಾಗಿದೆ. ತಾಲೂಕಿನ ೮೧ ಗ್ರಾಮಗಳಿಂದ ಗೋಗ್ರಾಸ ಯಶಸ್ವಿಯಾಗಿ ನಡೆಯುವ ದೃಷ್ಟಿಯಿಂದ ತಾಲೂಕಿನ ಜನತೆ ಪಾಲ್ಗೊಳ್ಳಬೇಕು. ಸಾಮೂಹಿಕ ಗೋಪೂಜೆಯೊಂದಿಗೆ ನಂದಗೋಕುಲ ದೀಪೋತ್ಸವ ನಂದಾದೀಪವಾಗಿ ಪಶುಪಾಲನೆಗೆ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು.
ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ಪೂರಣ್ ವರ್ಮ, ಟ್ರಸ್ಟ್ ಅಧ್ಯಕ್ಷ ಡಾ| ಎಂ.ಎಂ.ದಯಾಕರ್, ನ.ಪಂ. ಅಧ್ಯಕ್ಷೆ ರಜನಿ ಕುಡ್ವ, ಪ್ರಮುಖರಾದ ಪದ್ಮನಾಭ ಶೆಟ್ಟಿಗಾರ್, ಸೀತಾರಾಮ ಬೆಳಲು, ಭಾಸ್ಕರ್ ಧರ್ಮಸ್ಥಳ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ನವೀನ್ ನೆರಿಯ, ಅರವಿಂದ ಕಾರಂತ್ ಉಪಸ್ಥಿತರಿದ್ದರು.
೩೫ ವಾಹನಗಳಲ್ಲಿ ಬೈಹುಲ್ಲು, ಅಡಿಕೆ, ಅಕ್ಕಿ, ಬಾಳೆ ಸಹಿತ ಹಲವು ಕೃಷಿ ಉತ್ಪನ್ನಗಳನ್ನು ಸಮರ್ಪಿಸಲಾಯಿತು. ನಾರಾವಿ, ಅಳದಂಗಡಿ, ಕುವೆಟ್ಟು ಕಣಿಯೂರು ಮಹಾಶಕ್ತಿ ಕೇಂದ್ರ, ಲಾಲ ಮಹಾಶಕ್ತಿ ಕೇಂದ್ರ, ಉಜಿರೆ ಮಹಾಶಕ್ತಿ ಕೇಂದ್ರ, ಧರ್ಮಸ್ಥಳ, ಕೊಕ್ಕಡ, ಶಿಶಿಲ, ಕಳೆಂಜ ಸಹಿತ ಇತರೆಡೆಗಳಿಂದ ಗೋಗ್ರಾಸ ಸಂಗ್ರಹಿಸಲಾಯಿತು.
ಡಿ.೨೫ರಂದು ಸಂಜೆ ಸಾಮೂಹಿಕ ಗೋಪೂಜೆ, ಗೋನಂದಾರತಿ ಮತ್ತು ದೀಪೋತ್ಸವವನ್ನು ಆಚರಿಸಲಿದೆ. ಕಳೆಂಜ ಕಾಯರ್ತಡ್ಕ ನಂದಗೋಕುಲ ಗೋಶಾಲೆಯ ಕಾಮಧೇನು ವೇದಿಕೆಯಲ್ಲಿ ಡಿ.೨೫ ರಂದು ಸಂಜೆ ೪ಕ್ಕೆ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಂದು ಸಾಮೂಹಿಕ ಗೋಪೂಜೆ ನಡೆಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ| ಎಂ.ಎಂ.ದಯಾಕರ್ ತಿಳಿಸಿದರು.