ಬೆಳ್ತಂಗಡಿ: ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಸಂಭ್ರಮ ಇಂದಿನಿಂದ ಆರುದಿನಗಳ ಕಾಲ ನಡೆಯಲಿದೆ. ಧಾರ್ಮಿಕ, ಜ್ಞಾನ ದಾಸೋಹದ ಕಾರ್ಯಕ್ರಮಗಳಿಗಾಗಿ ಶ್ರೀಕ್ಷೇತ್ರವು ಸಕಲ ರೀತಿಯಲ್ಲಿ ಸಜ್ಜಾಗಿದೆ. ಕ್ಷೇತ್ರವನ್ನು ವಿದ್ಯುದೀಪಗಳಿಂದ ಸಮೃದ್ಧಗೊಳಿಸಲಾಗಿದ್ದು ಭಕ್ತಬಂಧುಗಳ ಸ್ವಾಗತಕ್ಕೆ ಎಲ್ಲಾ ತಯಾರಿಯೂ ನಡೆದಿದೆ.
ಇಂದಿನ ಕಾರ್ಯಕ್ರಮಗಳು:
ವಸ್ತುಪ್ರದರ್ಶನ ಉದ್ಘಾಟನೆ: ಕ್ಷೇತ್ರದ ಸನಿಹವಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಬೃಹತ್ ಚಪ್ಪರ ಹಾಕಲಾಗಿದ್ದು, ಅಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ನಡೆಯಲಿದೆ. ವಿವಿಧ ರೀತಿ ಜ್ಞಾನವರ್ಧಕ ಮಾಹಿತಿಗಳು, ಕ್ಷೇತ್ರದಿಂದ ನಡೆಯುವ ಸೇವಾ ಪ್ರಕಲ್ಪಗಳ, ಸರಕಾರದ ಯೋಜನಗಳ ತಿಳುವಳಿಕೆ ಸಂದರ್ಶಕರಿಗೆ ಸಿಗಲಿದೆ. ಅಲ್ಲದೆ ಪುಸ್ತಕ, ತಿಂಡಿ, ಬಟ್ಟೆಗಳ ಮಳಿಗೆ ಇತ್ಯಾದಿಗಳು ಕಾಣಸಿಗಲಿವೆ. ವಸ್ತುಪ್ರದರ್ಶನವನ್ನು ಶಾಸಕ ಹರೀಶ್ ಪೂಂಜ ಬೆಳಿಗ್ಗೆ 10-30ಕ್ಕೆ ಉದ್ಘಾಟಿಸಲಿದ್ದಾರೆ. ಮಳಿಗೆಗಳ ಜೊತೆಗೆ ಕಲಾಮಂಟಪವೂ ಇದ್ದು ಅಲ್ಲಿ ಪ್ರತಿದಿನ ಸಂಗೀತ, ನೃತ್ಯ ಇತ್ಯಾದಿ ಕ್ಷೇತ್ರಗಳ ಸಾಧಕರಿಂದ ವಿವಿಧ ಪ್ರಸ್ತುತಿಗಳು ನಡೆಯಲಿವೆ.
ಪಾದಯಾತ್ರೆ: ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದವರೆಗೆ ಸುಮಾರು 25,000 ಕ್ಕೂ ಹೆಚ್ಚು ಮಂದಿ ಪಂಚಾಕ್ಷರಿ ಜಪದೊಂದಿಗೆ ಪಾದಯಾತ್ರೆ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಬಾಲವೃದ್ಧರಾದಿಯಾಗಿ ಮಹಿಳೆಯುರೂ ಪುರುಷರೂ ಪಾಲ್ಗೊಳ್ಳಲಿದ್ದಾರೆ. 10 ನೇ ವರ್ಷದ ಪಾದಯಾತ್ರೆಗೆ ಇಂದು ಮಧ್ಯಾಹ್ನ 3 ಗಂಟೆಗೆ ಚಾಲನೆ ದೊರೆಯಲಿದೆ. ಸಂಜೆ ಸುಮಾರು ಗಂಟೆಯ ವೇಳೆಗೆ ಪಾದಯಾತ್ರೆಯು ಧರ್ಮಸ್ಥಳವನ್ನು ತಲುಪಲಿದೆ. ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಪಾದಯಾತ್ರಿಕರನ್ನು ಉದ್ದೇಶಿಸಿ ಆಶೀರ್ವದಿಸಲಿದ್ದಾರೆ.
ವಸ್ತು ಪ್ರದರ್ಶನ ಮಂಟಪದಲ್ಲಿ ನಡೆಯುವ ಇಂದಿನ ಕಾರ್ಯಕ್ರಮಗಳು ಹೀಗೆ ಇವೆ: ಸಂಜೆ ಗಂಟೆ 6.30 ರಿಂದ 7-30 ರವರೆಗೆ ಸುಪ್ರೀತಾ ಧರ್ಮಸ್ಥಳ ಇವರಿಂದ ಸಂಗೀತ, 7-30 ರಿಂದ 8-30 ರವರೆಗೆ ಬೆಂಗಳೂರಿನ ವಿದುಷಿ ಹರ್ಷಿತಾ ಸುದೇಶ ಮತ್ತು ತಂಡದವರಿಂದ ನೃತ್ಯರೂಪಕ ನೃತ್ಯರೂಪಕ ರಾತ್ರಿ ಗಂಟೆ 8-30 ರಿಂದ 10 ಗಂಟೆಯವರೆಗೆ ಗೋಣಿಕೊಪ್ಪಲು ಶ್ರೀ ದುರ್ಗಾ ಮ್ಯೂಸಿಕಲ್ ನೈಟ್ಸ್ನ ಅನ್ವಿತ್ ಕುಮಾರ್ ಅವರಿಂದ ರಸಮಂಜರಿಯ ಪ್ರಸ್ತುತಿ ಇರಲಿದೆ.
ದೇವರ ಉತ್ಸವ: ರಾತ್ರಿ 9 ಗಂಟೆಯ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ ಸಂಪನ್ನಗೊಳ್ಳಲಿದೆ.
ನಾಳಿನ ಕಾರ್ಯಕ್ರಮಗಳು: ನ. 20 ರಂದು ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6.30 ರಿಂದ ಕಾಸರಗೋಡು ಸಂಗೀತ ಕಲಾ ಸಂಗಮದ ವಿದುಷಿ ಅನುರಾಧಾ ಅಡ್ಕಸ್ಥಳ ಇವರಿಂದ ಶಾಸ್ತ್ರೀಯ ಸಂಗೀತ ಬಳಿಕ ಮೈಸೂರು ಸಿರಿ ಮತ್ತು ಶ್ರೀವತ್ಸ ಶರ್ಮ ಅವರಿಂದ ಸಿರಿ ವಾನಳ್ಳಿ ಅಭಿನಯದ ಆನಂದ ಭಾಮಿನಿ ಎಂಬ ಏಕವ್ಯಕ್ತಿ ನಾಟಕ, ನಂತರ ಶ್ರವಣಬೆಳಗೊಳದ ಸರ್ವೇಶ್ ಜೈನ್ ಮತ್ತು ತಂಡದವರಿಂದ ಜಿನಗಾನ ಬೀಟ್ಸ್ ಆರ್ಕೆಸ್ಟ್ರಾ ನಡೆಯಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆ ಉತ್ಸವ ನೆರವೇರಲಿದೆ.