ಬೆಳ್ತಂಗಡಿ: ಕಂದಾಯ ಇಲಾಖೆಯು ರೈತನ ಕೃಷಿ ಜಮೀನನ್ನು ಕಾನೂನು ಬಾಹಿರವಾಗಿ ಮೂರನೇ ವ್ಯಕ್ತಿಗಳಿಗೆ ಹಸ್ತಾಂತರಿಸಲು ಹುನ್ನಾರ ನಡೆಸುತ್ತಿರುವುದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದರು.
ಅವರು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಂಘದ ವಠಾರದಲ್ಲಿ ನ.೧೪ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಕಣಿಯೂರು ಗ್ರಾಮದ ಪದ್ಮುಂಜದಲ್ಲಿರುವ ಸರ್ವೆ ನಂಬರ್ ೧೧೩ ರಲ್ಲಿರುವ ರೈತನ ಕೃಷಿ ಜಮೀನನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿ ಸುಮಾರು ೪೫ ವರ್ಷಗಳಿಂದಲೂ ಅನುಭೋಗ ಹೊಂದಿ ಅಡಕೆ, ಗೇರು ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು, ಕುಮ್ಕಿ ಹಕ್ಕನ್ನು ವಿರಹಿತಗೊಳಿಸದೆ ಯಾವುದೇ ಮ್ಯೂಟೇಶನ್ ಇಲ್ಲದೆ ಕೇವಲ ಪಹಣಿಯಲ್ಲಿ “ಮಿಲಿಟರಿಯವರಿಗೆ” ಎಂದು ದಾಖಲಾತಿಯನ್ನು ಮಾಡಿ, ಅದನ್ನು ಮಿಲಿಟರಿಯವರಿಗೆ ಕಾದಿರಿಸಿದ ಭೂಮಿ ಎಂಬ ನೆಪದಲ್ಲಿ, ಭೂಮಿ ಮಂಜೂರಾತಿಗೆ ಆಗ್ರಹಿಸಿ ರೈತ ಅರ್ಜಿ ನಮೂನೆ ೫೭ರಲ್ಲಿ ಅರ್ಜಿ ನೀಡಿದ್ದರೂ ಅದನ್ನು ಅಕ್ರಮ ಸಕ್ರಮ ಸಮಿತಿಯಲ್ಲಿಡದೆ ವಜಾಗೊಳಿಸಿ ಮೂರನೇ ವ್ಯಕ್ತಿಗಳಿಗೆ ಮಂಜೂರು ಮಾಡಿ ರೈತ ಕುಟುಂಬವನ್ನು ಕಂದಾಯ ಇಲಾಖೆ ವಂಚಿಸಿದೆ ಎಂದು ಆರೋಪಿಸಿದರು.
ಮೂರನೇ ವ್ಯಕ್ತಿಗೆ ಮಂಜೂರು ಮಾಡುವಲ್ಲಿ ವರದಿ ನೀಡಿದ ಕ್ರಮವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿಗೆ ‘ಸ್ಟೇಟಿಸ್ಕೋ’ ಇದ್ದರೂ, ತಹಸೀಲ್ದಾರರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ನ.೧೦ರಂದು ಭೂಸ್ವಾಧೀನಕ್ಕೆ ಪ್ರಯತ್ನಿಸಿದ್ದರು. ಈ ಸಂದರ್ಭ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಬಗ್ಗೆ ತಿಳಿಸಿದಾಗ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಈ ಸಂದರ್ಭ ಪ.ಜಾತಿ, ಪಂಗಡದ ಇಬ್ಬರಿಗೆ ಜಾತಿ ನಿಂದನೆ ಮಾಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ನೀಡಲಾದ ದೂರು ದಾಖಲಾಗಿದೆ. ರೈತನ ಭೂಮಿಯನ್ನು ಕಾನೂನು ಬಾಹಿರವಾಗಿ ಮೂರನೇ ವ್ಯಕ್ತಿಗೆ ಮಂಜೂರು ಮಾಡಿರುವ ವಿಚಾರದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನ್ಯಾಯಯುತ ಚಳುವಳಿ ನಡೆಸಲಾಗುವುದು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಪ್ರೇಮನಾಥ ಶೆಟ್ಟಿ, ಬಾಳ್ತಿಲ, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ದಲಿತ ಹಕ್ಕುಗಳ ಸಮಿತಿಯ ಮುಖಂಡ ಶೇಖರ್ ಲಾಯಿಲ, ಯುವ ರೈತ ಘಟಕದ ಜಿಲ್ಲಾಧ್ಯಕ್ಷ ಆದಿತ್ಯನಾರಾಯಣ ಕೊಲ್ಲಾಜೆ, ಗೌರವಾಧ್ಯಕ್ಷ ಸುರೇಂದ್ರ ಕೋರ್ಯ ಕೋಶಾಧಿಕಾರಿ ಮನೋಜ್ ಕುಮಾರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಲ್ಲಡ್ಕ ಉಪಸ್ಥಿತರಿದ್ದರು.