ಬೆಳ್ತಂಗಡಿ: ಒಬ್ಬ ಜ್ಞಾನಿಯಾಗಬೇಕಾದರೆ ಹಿಂದೆ ಗುರುಕುಲಕ್ಕೆ ಕಳುಹಿಸುತ್ತಿದ್ದರು. ಗುರು ಅಂದರೆ ಅರಿವು. ಐದು ಜ್ಞಾನೇಂದ್ರಿಯ, ಐದು ಕರ್ಮೆಂದ್ರಿಯ, ಐದು ಪ್ರಾಣೇಂದ್ರಿಯ, ಉಳಿದಂತೆ ಮನಸ್ಸು ಬುದ್ಧಿ, ಚಿತ್ತ ಅಹಂಕಾರ, ಜೀವ. ಮನುಷ್ಯ ತನ್ನ ಜ್ಞಾನದ ಅರಿವಿನ ಮಹತ್ವದಡಿ ಸಮಾಜ ಶುದ್ಧಿಗಾಗಿ ಸಮಯ ವಿನೊಯೋಗಿಸಬೇಕಿದೆ ಎಂದು ಗೌರಿಗದ್ದೆ ಅವಧೂತ ಶ್ರೀ ವಿನಯ ಗುರೂಜಿ ನುಡಿದರು.
ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ದಶಮಾನೋತ್ಸವದ ಸವಿ ನೆನಪಿಗಾಗಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಅವರ 525 ನೇ ಸೇವಾ ಯೋಜನೆ ಪ್ರಯುಕ್ತ ಸೆ.24 ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಫಲಾನುಭವಿಗೆ 34 ನೇ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಾಧನೆ ಎಲ್ಲರೂ ಮಾಡುತ್ತಾರೆ, ಆದರೆ ಶೋಧನೆ ಮಾಡಿ ಸಾಧನೆ ಮಾಡುವುದು ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಓರ್ವ ಚಾಲಕ, ನಿರ್ವಾಹಕರಂತ ಬಡ ಕುಟುಂಬದ ಯುವಕರು ಜತೆಗೂಡಿ ಸೇವಾಕಾರ್ಯದ ಸಾಧನೆ ಮಾಡುತ್ತಾರೆ ಎಂದರೆ ಅದುವೇ ನೈಜ ಭಾರತ ಎಂದು ಅವರು, ರಾಜಕೇಸರಿ ಸಂಘಟನೆಯ ಸೇವಾಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ವರ್ಷದಿಂದ ವೀಲ್ ಚೇರ್ ಹಾಗೂ ಟೈಲರಿಂಗ್ ಯಂತ್ರವನ್ನು ತಾನ್ಮೂಲಕ ನೀಡುವುದಾಗಿ ಘೋಷಿಸಿದರು. ಜಗತ್ತಿಗೆ ಅಗತ್ಯವಿರುವ ಐದು ಪೂಜೆಗಳನ್ನು ಮಾಡಬೇಕು. ಅದುವೆಂದರೆ ಅರಿವು, ಅರಿವೆ, ಆಹಾರ, ಆರೋಗ್ಯ, ಆಧಾಯ. ಶಿಕ್ಷಣ ಜ್ಞಾನದ ನಮ್ಮ ನಡತೆಯನ್ನು ಸರಿಮಾಡಿಲ್ಲವೋ ಜ್ಞಾನ ಇದ್ದು ಪ್ರಯೋಜನವಿಲ್ಲ. ಸ್ವದೇಶಿ ಚಿಂತನೆ ಮನೆಯಿಂದ ಮೂಡುವಂತಹದು ಎಂದು ಹೇಳಿದರು. ಭಾರತೀಯ ರಾಜಕೀಯದಲ್ಲಿ ಮೋದಿ ಪ್ರಭಾವಿತರಾಗಿದ್ದು ಅಂದು ಮೊಗಲರ ಆಡಳಿತದಲ್ಲಿ ಶಿವಾಜಿ ಬಂದಂತಾಗಿದೆ ಎಂದ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜ ಅವರು ಮಂತ್ರಿಪದವಿ ಯೋಗ್ಯರು ಎಂದು ಆಶೀರ್ವದಿಸಿದರು.
ಅಧ್ಯಕ್ಷತೆ ವಹಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಸಮಾಜದ ಕಟ್ಟಕಡೆಯ ಸಶಕ್ತ ಬಂಧುಗಳನ್ನು ಗುರುತಿಸಿ ಹಂತ ಹಂತವಾಗಿ ವಿವಿಧ ಕ್ಷೇತ್ರದಲ್ಲಿ ಆಸರೆಯಾಗುವ ಕೆಲಸ ರಾಜಕೇಸರಿ ಟ್ರಸ್ಟ್ ನಿಂದಾಗಿದೆ. ನಾವೆಲ್ಲ ರಾಜಕೇಸರಿಯಂತ ಯುವಕರು ಸಮಾಜದಲ್ಲಿ ಬೆಳೆಯುವಲ್ಲಿ ನಮ್ಮೆಲ್ಲರ ಪೂರ್ಣ ಸಹಾಕಾರ ಬೇಕಾಗಿದೆ. ಶಾಸಕನ ನೆಲೆಯಲ್ಲಿ ಪ್ರತಿ ಸೇವಾಕಾರ್ಯದಲ್ಲಿ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು. ಮಂಗಳೂರಿನ ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ, ಶ್ರೀ ಕ್ಷೇತ್ರ ಮಂತ್ರದೇವತೆ ಸಾನಿಧ್ಯ ಕಟ್ಟೆಮಾರ್ (ಅಮ್ಟೂರು) ಇದರ ಆಡಳಿತ ಮೊಕ್ತೇಸರ ಮನೋಜ್ ಕಟ್ಟೆಮಾರ್, ವೈದ್ಯಕೀಯ ಪ್ರಕೋಷ್ಠದ ತಾಲೂಕು ಸಂಚಾಲಕ ಡಾ.ಎಂ.ಎಂ. ದಯಾಕರ್, ಚಲನಚಿತ್ರ ನಟ ವಿನಿತ್ ಕುಮಾರ್ ಶುಭ ಹಾರೈಸಿದರು. ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ರಾಜ ಕೇಸರಿ ತಾಲೂಕು ಸಂಘಟನೆ ಅಧ್ಯಕ್ಷ ನಾಗೇಶ್ ಬಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಪ್ರಬಂಧಕ ಹೇಮಂತ್ ಶೆಟ್ಟಿ, ಉದ್ಯಮಿ ಸೀತಾರಾಮ್ ಶೆಟ್ಟಿ, ಪತ್ರಕರ್ತ ಮನೋಹರ್ ಬಳಂಜ, ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್, ಹುಮ್ಯಾನಿಟಿ ಟ್ರಸ್ಟ್ ಸಂಸ್ಥಾಪಕ ರೋಷನ್ ಬೆಳ್ಮಣ್, ಆಲಡ್ಕ ಹಿಂದು ಯುವ ಶಕ್ತಿ ಅಧ್ಯಕ್ಷ ದೇವದಾಸ್ ಸಾಲಿಯಾನ್, ರಾಜಕೇಸರಿ ಹಾಸನ ಜಿಲ್ಲೆ ಅಧ್ಯಕ್ಷ ಬಸವರಾಜ್, ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಗುರುಪ್ರಸಾದ್ ಉಪಸ್ಥಿತರಿದ್ದರು. ಸಂಘಟನೆಯ ಆರೋಗ್ಯ ಸಲಹೆಗಾರ ಅಜಯ್ ಸ್ವಾಗತಿಸಿದರು. ಲೋಹಿತ್ ಕಾರ್ಯಕ್ರಮ ನಿರೂಪಿಸಿದರು.
ಸಂಜೆ 5.30 ರಿಂದ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ನ ಕಡೆ ಶಿವಾಲಯ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಜೀವ್ ಬಿ.ಎಚ್. ಹಾಗೂ ಮನೋಜ್ ಸವಣಾಲು ಅವರಿಂದ ಜಾದು ಪ್ರದರ್ಶನ, ರಾತ್ರಿ 8.30 ರಿಂದ ಪಿಂಗಾರ ಕಲಾವಿದರ್ ಬೆದ್ರ ಅವರಿಂದ ನಂಬುಂಡ ನಂಬುಲೆ ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.
ಸಂಘಟನೆಯು ಸತತ 10 ವರ್ಷದಲ್ಲಿ 1.90 ಕೋಟಿ ರೂ. ವೆಚ್ಚದಲ್ಲಿ 34 ಮನೆ ನಿರ್ಮಾಣಕಾರ್ಯ ಮಾಡಿದೆ. ಪ್ರಸಕ್ತ 34 ನೇ ಮನೆಯ ಕೀಲಿ ಕೈಯನ್ನು ಮೇಲಂತಬೆಟ್ಟು ಗ್ರಾಮದ ಸವಣಾಲಿನ ಶಾಂತಾ ನಾಯ್ಕ್ ಅವರಿಗೆ ಹಸ್ತಾಂತರಿಸಲಾಯಿತು. ಮೂವರಿಗೆ ವೀಲ್ ಚೇರ್ ಮತ್ತು ಮೂವರಿಗೆ ಟೈಲರ್ ಮಿಷನ್, ಓರ್ವರಿಗೆ ವಾಟರ್ ಬೆಡ್, ಒಂದು ಕುಟುಂಬಕ್ಕೆ ಅಕ್ಕಿ ಹಾಗು ದಿನಸಿ ಸಾಮಗ್ರಿ ಹಸ್ತಾಂತರಿಸಲಾಯಿತು.