ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಸ್ಥಾನದ ಅಭ್ಯರ್ಥಿ ಶ್ರೀ ಹರೀಶ್ ಪೂಂಜಾರವರು ಸೋಮವಾರ ಬೆಳಗ್ಗೆ ಬೆಳ್ತಂಗಡಿ ಕುತ್ಯರು ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ ಸಹಸ್ರಾರು ಸಂಖ್ಯೆಯ ಪಕ್ಷದ ಹಿರಿಯರು ಕಾರ್ಯಕರ್ತರು, ಅಭಿಮಾನಿಗಳು, ಮತ್ತು ಮತದಾರರು, ಬೆಂಬಲಿಗರೊಂದಿಗೆ, ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಬೆಳ್ತಂಗಡಿ ತಾಲೂಕು ಚುನಾವಣಾ ಕಚೇರಿಗೆ ತೆರಳಿ ಮಧ್ಯಾಹ್ನ 11:30 ಗಂಟೆಗೆ ನಾಮಪತ್ರ ಸಲ್ಲಿಸಿದರು. ಸುಮಾರು 35000ಕ್ಕಿಂತ ಹೆಚ್ಚು ಮತದಾರ ಬೆಂಬಲಿಗರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ನವ ಬೆಳ್ತಂಗಡಿಯ ಕನಸುಗಾರ ಹರೀಶ್ ಪೂಂಜ: ಪ್ರತಾಪಸಿಂಹ ನಾಯಕ್
ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ನಾಮಪತ್ರದ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪಸಿಂಹ ನಾಯಕ್ ಅವರು, ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಜನರ ಮುಂದೆ ಹೋದಾಗ ಯಾವೆಲ್ಲಾ ಭರವಸೆಗಳನ್ನು ನಾವು ನೀಡಿದ್ದೇವೋ ಬಹುಶಃ ಅವರ ಯುವ ಮನಸ್ಸು ಹಾಗೂ ಕನಸು ಕಾಣುವಂತಹ ಆ ಶಕ್ತಿ ಎಲ್ಲಾ ಒಳ್ಳೆಯ ಕಾರ್ಯಕ್ರಮಗಳನ್ನ ನಮ್ಮ ತಾಲೂಕಿಗೆ ಕೊಟ್ಟದ್ದು ಮಾತ್ರವಲ್ಲ ನಿರೀಕ್ಷೆಯನ್ನು ಮೀರಿ ಹೊಸತನವನ್ನು ತಂದು ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ನಿಜವಾದ ಅರ್ಥದಲ್ಲಿ ನವ ಬೆಳ್ತಂಗಡಿ ಕನಸುಗಾರ ಹೇಳುವಂತದ್ದನ್ನ ಕಳೆದ ಐದು ವರ್ಷದ ಸೇವೆಯನ್ನು ಶಾಸಕರಾಗಿ ಹರೀಶ್ ಪೂಂಜರು ಮಾಡುವುದರ ಮೂಲಕ ಪ್ರತಿಯೊಂದು ಯೋಜನೆಯಲ್ಲಿಯೂ ಹೊಸತನವನ್ನು ತಂದಿದ್ದಾರೆ ಮತ್ತು ಭವಿಷ್ಯ ದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಬೂತ್ವರೆಗೂ ಈ ಅಭಿವೃದ್ಧಿಯನ್ನು ತಲುಪಿಸಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿಯೂ ಹರೀಶ್ ಪೂಂಜರು ಮಾಡಿರುವ ಸಾಧನೆಯನ್ನು, ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಸಾಧನೆಯನ್ನು, ಕರ್ನಾಟಕ ರಾಜ್ಯದ ಬಿಜೆಪಿ ಸರಕಾರದ ಸಾಧನೆಗಳನ್ನು ಜನರ ಮನಸ್ಸಿಗೆ ತಲುಪಿಸುವುದರ ಮೂಲಕ ಅವರ ಆಶೀರ್ವಾದವನ್ನು ಯಾಚನೆ ಮಾಡುತ್ತೇವೆ. ಈಗ ತಾನೆ ತಮ್ಮೆಲ್ಲರ ಗಮನದಲ್ಲಿ ಇರುವಂತೆ ಏನಾದರೂ ಹೊಸತನವನ್ನು ತರುವಂತಹ ದೃಷ್ಟಿಯಲ್ಲಿ ದೃಢವಾದ ಹೆಜ್ಜೆಯನ್ನು ಇಟ್ಟುಭವಿಷ್ಯದ ದೃಷ್ಟಿಯಿಂದ ದೇಶಕ್ಕೆ ರಾಜ್ಯಕ್ಕೆ ಮತ್ತು ನಮ್ಮ ಊರಿಗೆ ಒಳ್ಳೆಯ ಬೆಳವಣಿಗೆ ಕೊಡಬಲ್ಲಹ ಶಕ್ತಿ ಅದು ಭಾರತೀಯ ಜನತಾ ಪಾರ್ಟಿಗೆ ಇದೆ. ಮುಂದಿನ ದಿನಗಳಲ್ಲಿ ಬಿಜೆಪಿ ಬೆಳ್ತಂಗಡಿ ಮಾತ್ರವಲ್ಲ ಕರ್ನಾಟಕದಲ್ಲಿಯೂ ಪೂರ್ಣ ಬಹುಮತದ ಜತೆಗೆ ಅಭೂತಪೂರ್ವವಾದ ವಿಜಯವನ್ನು ಪಡೆಯುತ್ತದೆ ಮತ್ತು ದ.ಕ.ದಲ್ಲಿ ೮ ಕ್ಕೆ ೮ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವುದರ ಮೂಲಕ ಬಹುಮತಕ್ಕೆ ಕೊಡುಗೆ ನೀಡುತ್ತದೆ. ಡಬಲ್ ಇಂಜಿನ್ ಸರಕಾರದ ಜತೆ ನಮ್ಮ ವಿಜಯದ ಮಾರ್ಜಿನ್ ಅದು ಡಬಲ್ ಆಗಿರುತ್ತದೆ ಎಂದರು.
ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶೀ ಪ್ರಸಾದ್ ಕುಮಾರ್, ಆರ್ಎಸ್ಎಸ್ ಪ್ರಮುಖ್ ನಾ.ಸೀತಾರಾಮ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬರೋಡಾದ ಉದ್ಯಮಿ ಶಶಿಧರ್ ಶೆಟ್ಟಿ ಗುರುವಾಯನಕೆರೆ, ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಕ್ಷೇತ್ರ ಪ್ರವಾಸಿ ಪ್ರಬಾರಿ, ಕೇರಳ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್, ಚುನಾವಣಾ ಕ್ಷೇತ್ರ ಪ್ರಭಾರಿ ಯತೀಶ್, ಕ್ಷೇತ್ರ ಸಂಯೋಜಕ್, ಶಿವಪ್ರಸಾದ್ ಮಲೆಬೆಟ್ಟು, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಜೋಯೆಲ್ ಮೆಂಡೋನ್ಸಾ, ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಮಂಡಲ ಪ್ರ. ಕಾರ್ಯಧರ್ಶಿಗಳಾದ ಶ್ರೀನಿವಾಸ್ ರಾವ್ ಮತ್ತು ಗಣೇಶ್ ಗೌಡ, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ನಂದಕುಮಾರ್, ಹರೀಶ್ ಪೂಂಜ ಅವರ ತಂದೆ ಮುತ್ತಣ್ಣ ಪೂಂಜ, ತಾಯಿ ನಳಿನಿ ಪೂಂಜ, ಪತ್ನಿ ಸ್ವೀಕೃತಿ ಹಾಗೂ ಕುಟುಂಬಸ್ಥರು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳು, ಶಕ್ತಿ ಕೇಂದ್ರದ ಅಧ್ಯಕ್ಷರುಗಳು, ಬೂತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು
ಸೋಮವಾರ ಬೆಳಗ್ಗೆ ಗಂಟೆ ಒಂಬತ್ತರಿಂದಲೇ ತಾಲೂಕಿನ ಮೂಲೆಮೂಲೆಯಿಂದ ಬಿಜೆಪಿ ಕಾರ್ಯಕರ್ತರು ಕುತ್ಯಾರು ದೇವಸ್ಥಾನ ಬಳಿ ಜಮಾಯಿಸತೊಡಗಿದ್ದರು. ನಾಮಪತ್ರ ಸಲ್ಲಿಕೆ ಇರುವ ಕಾತಣ ಜಿಲ್ಲಾಡಳಿತ ಮಾರ್ಗ ಬದಲಾವಣೆಯನ್ನು ಮಾಡಿತ್ತು. ಹತ್ತು ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ೮೧ ಗ್ರಾಮದ ೨೪೩ ಬೂತ್ಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದರು. ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಹರೀಶ್ ಪೂಂಜ ಅವರು ಕುತ್ಯಾರು ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಕಾರ್ಯಕರ್ತರ ಘೋಷಣೆಗಳು ಮುಗಿಲು ಮುಟ್ಟಿತ್ತು. ಕುತ್ಯಾರು ದೇವಸ್ಥಾನ ಆವರಣದಲ್ಲಿ ನೂರಾರು ಮಂದಿ ಬೇರೆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ತೆರೆದ ಜೀಪಿನಲ್ಲಿ ಹಿರಿಯ ನಾಯಕರೊಂದಿಗೆ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಲು ತೆರಳಿದರು. ದಾರಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರ ಘೋಷಣೆಗಳು ಮುಗಿಲು ಮುಟ್ಟಿತ್ತು. ಕೇರಳ ಚೆಂಡೆ, ನಾಸಿಕ್ ಬ್ಯಾಂಡ್ ಮಧ್ಯೆ ಬಿಜೆಪಿ ಕಾರ್ಯಕರ್ತರು ಕುತ್ಯಾರು ದೇವಸ್ಥಾನದಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ವರೆಗೆ ಕಾಲ್ನಾಡಿಗೆ ಮೂಲಕ ಸಾಗಿ ಬಂದರು. ಮಧ್ಯಾಹ್ನ ೧೨ ಗಂಟೆಗೆ ಮಿನಿ ವಿಧಾನಸೌಧ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.