ಬೆಳ್ತಂಗಡಿ: ತಾಲೂಕಿನ ನೆರಿಯ ಹಾಗೂ ಉಜಿರೆ ಪ್ರದೇಶಗಳಲ್ಲಿ ಬೆಂಕಿ ಅನಾಹುತಗಳು ಸಂಭವಿಸಿದ ಘಟನೆ ನಡೆದಿದೆ.
ನೆರಿಯ ಗ್ರಾಮದ ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯದಲ್ಲಿ ಪಟ್ಲ,ಕಾಟಜೆ ಮೊದಲಾದ ಕಡೆ, ಬೆಂಕಿ ಕಂಡುಬಂದು ಕಾಡಿನಲ್ಲಿದ್ದ ಹುಲ್ಲು ಹೊತ್ತಿ ಉರಿದಿದೆ.
ಅರಣ್ಯದ ಕಲ್ಲುಗಳ ಮೇಲೆ ಬೆಳೆದಿರುವ ಒಣ ಹುಲ್ಲಿಗೆ ಬೆಂಕಿ ಹತ್ತಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಸ್ಥಳೀಯರ ಸಹಕಾರದಲ್ಲಿ ಶೌರ್ಯ ವಿಪತ್ತು ತಂಡ ಹಾಗೂ ಣ್ಯ ಇಲಾಖೆಯ ಡಿ ಆರ್ ಎಫ್ ಒ ಯತಿಂದ್ರ ಗಸ್ತು ಅರಣ್ಯ ಪಾಲಕ ಪಾಂಡುರಂಗ ಕಮತಿ ಹಾಗೂ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಇದರಿಂದ ಬೆಂಕಿ ವನ್ಯ ಸಂಪತ್ತು ಇರುವ ದಟ್ಟ ಅರಣ್ಯದ ಕಡೆಗೆ ಪಸರಿಸಿಲ್ಲ ಎಂದು ಹೇಳಲಾಗಿದೆ. ನೆರಿಯ ಪರಿಸರದ ಬಾಂಜಾರು ಮಲೆ ಹಾಗೂ ಇನ್ನಿತರ ಕೆಲವು ಖಾಸಗಿ ಸ್ಥಳಗಳಲ್ಲೂ ಬೆಂಕಿ ಪ್ರಕರಣಗಳು ಉಂಟಾಗಿರುವ ಕುರಿತು ತಿಳಿದು ಬಂದಿದೆ.
ಉಜಿರೆಯ ನಿನ್ನಿಗಲ್ಲು ಪಾಲೆಂಜ ಎಂಬಲ್ಲಿ ಕಿಡಿಗೇಡಿಗಳು ರಸ್ತೆ ಬದಿ ಒಣಹುಲ್ಲಿಗೆ ಬೆಂಕಿ ಹಚ್ಚಿದ ಪರಿಣಾಮದಿಂದ ಪರಿಸರದಲ್ಲಿ ಬೆಂಕಿ ಆವರಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಸಮೀಪದಲ್ಲಿ ಇರುವ ಖಾಸಗಿ ಕಂಪನಿಯ ಮೊಬೈಲ್ ಟವರ್ ಹತ್ತಿರದವರೆಗೂ ಬೆಂಕಿ ವ್ಯಾಪಿಸಿ ಖಾಸಗಿ ಸ್ಥಳಗಳತ್ತ ಪಸರಿಸಿತು. ಡಿ ಆರ್ ಎಫ್ ಒ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ರವಿ, ವೀಕ್ಷಕ ಸದಾನಂದ, ಉಜಿರೆ ಗ್ರಾಪಂ ಸದಸ್ಯ ಗುರುಪ್ರಸಾದ್ ಕೋಟ್ಯಾನ್, ಜೆರ್ಮಿ ಡೇಸಾ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಸಹಕರಿಸಿದರು. ಇಲ್ಲಿನ ರಸ್ತೆಯ ಇನ್ನೊಂದು ಭಾಗದಲ್ಲಿರುವ ಅರಣ್ಯ ಇಲಾಖೆಯ ನೆಡುತೋಪಿಗೆ ಸೋಮವಾರ ಬೆಂಕಿ ಬಿದ್ದು ಸುಮಾರು 3 ಎಕರೆ ಪ್ರದೇಶ ಆಹುತಿಯಾಗಿತ್ತು.
ಕಳೆದೊಂದು ವಾರದಿಂದ ನಿನ್ನಿಗಲ್ಲು ಪರಿಸರದ ಅಲ್ಲಲ್ಲಿ ಬೆಂಕಿ ಅನಾಹುತ ಉಂಟಾಗುತ್ತಿರುವ ಘಟನೆಗಳು ನಡೆಯುತ್ತಿವೆ.
ಚಾರ್ಮಾಡಿಯ ಆಲೆಖಾನ್ ಹೊರಟ್ಟಿ ಪ್ರದೇಶ, ಚಿಕ್ಕಮಗಳೂರು ವಿಭಾಗದ ಘಾಟಿ ಪರಿಸರದ ಅಲ್ಲಲ್ಲಿ ಲಘು ಪ್ರಮಾಣದಲ್ಲಿ ಬೆಂಕಿ ಉರಿಯುತ್ತಿದೆ ಎಂದು ತಿಳಿದುಬಂದಿದೆ.