ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಎರಡು ದಿನದ ರಾಜ್ಯ ಮಟ್ಟದ ವಿಜ್ಞಾನ ಮೇಳ ‘ಎಕ್ಸ್ಪೀರಿಯ 2022’ ಡಿ. 22 ಮತ್ತು 23 ರಂದು ಆಯೋಜಿಸಲಾಗಿದೆ ಎಂದು ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ರವೀಶ್ ಪಡುಮಲೆ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇಳದಲ್ಲಿ ವಿಜ್ಞಾನ ರಸಪ್ರಶ್ನೆ, ಗಣಿತದ ಒಗಟು, ಹ್ಯಾಕಥಾನ್, ಸಿ – ಲ್ಯಾಂಗ್ವೇಜ್ ರಸಪ್ರಶ್ನೆ ಮತ್ತು ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಗಳು ನಡೆಯಲಿದ್ದು, ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ವಹಿಸಲಿದ್ದಾರೆ ಎಂದರು.
ಈಗಾಗಲೇ 10 ಜಿಲ್ಲೆಗಳ ಕಾಲೇಜುಗಳನ್ನು ಸಂಪರ್ಕಿಸಲಾಗಿದ್ದು, 300 ರಿಂದ 400 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. 25 ಕಾಲೇಜುಗಳ ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ.
ಸ್ಪರ್ಧೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿಯೂ ನಡೆಯಲಿರುವುದು. ದೂರದ ಊರಿನ ವಿದ್ಯಾರ್ಥಿಗಳಿಗಾಗಿ ಊಟ-ವಸತಿ ವ್ಯವಸ್ಥೆ ಇರಲಿದ್ದು, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಹೊನಲು ಬೆಳಕಿನ ದೃಶ್ಯರೂಪಕವನ್ನು ಕೂಡ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ (08256)236621 , 9008490579 ಅಥವಾ 9964025500 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ವಿದ್ಯುನ್ಮಾನ ವಿಭಾಗದ ಪ್ರೊ.ಪ್ರತಾಪಚಂದ್ರ, ಭೌತಶಾಸ್ತ್ರ ವಿಭಾಗದ ಚೇತನ್ ರಾವ್ ಇದ್ದರು.