ಬೆಳ್ತಂಗಡಿ: ಸುಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ಯಾಡಿ ಗ್ರಾಮದ ಕೆಳಗಿನ ಬೆಟ್ಟು ಎಂಬಲ್ಲಿ ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸು ಚಿರತೆಗೆ ದಾಳಿಗೆ ಬಲಿಯಾದ ಘಟನೆ ಜ.5ರಂದು ನಡೆದಿದೆ.
ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಇಲ್ಲಿನ ಶೀನ ಪೂಜಾರಿ ಎಂಬವರ ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸು ಬೊಬ್ಬೆ ಹೊಡೆಯುವುದು ಕೇಳಿ ಮನೆಯವರು ತೋಟಕ್ಕೆ ಬಂದಾಗ ಹಸುವಿನ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಮನೆ ಮಂದಿ ಮೇಲು ಎರಗಲು ಯತ್ನಿಸಿದೆ ಎಂದು ತಿಳಿದುಬಂದಿದೆ. ಚಿರತೆಯ ದಾಳಿಗೆ ಹಸು ಮೃತಪಟ್ಟಿದೆ.
ವೇಣೂರು ಆರ್ ಎಫ್ ಒ ಮಹಿಮ್ ಜನ್ನು, ಡಿ ಆರ್ ಎಫ್ ಒ ಸುರೇಶ್ ಗೌಡ,ಸುಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೋನು ಅಳವಡಿಕೆ.
ಚಿರತೆ ದಾಳಿ ನಡೆಸಿದ ಪರಿಸರದಲ್ಲಿ ಬೋನು ಅಳವಡಿಸಲಾಗಿದ್ದು, ಚಿರತೆ ದಾಳಿಗೆ ಮೃತಪಟ್ಟ ಹಸುವಿಗೆ ಪರಿಹಾರ ಒದಗಿಸುವ ಭರವಸೆಯನ್ನು ಅರಣ್ಯ ಇಲಾಖೆ ನೀಡಿದೆ.