ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಕಾರ್ತೀಕ ಮಾಸದ ಲಕ್ಷದೀಪೋತ್ಸವ ಪ್ರಯುಕ್ತ ಮೊದಲದಿನ (ನ.19) ಉಜಿರೆ ಶ್ರೀ ಜನಾರ್ದನಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ನಾಡಿನ ಭಕ್ತಜನರ ಹತ್ತನೇ ವರ್ಷದ ಭಕ್ತಿ-ಭಜನೆಯ ಪಾದಯಾತ್ರೆಯು ಮದ್ಯಾಹ್ನ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯಿಂದ ಮೊದಲ್ಗೊಂಡು ಶಿವಪಂಚಾಕ್ಷರಿ ನಾಮಸ್ಮರಣೆಯೊಂದಿಗೆ ನಡೆಯಿತು.
ಶಾಸಕರಾದ ಹರೀಶ್ ಪೂಂಜಾ,ಹರೀಶ್ ಕುಮಾರ್ ಹಾಗು ಪ್ರತಾಪಸಿಂಹನಾಯಕ್,ಪಾದಯಾತ್ರೆಯ ಸಂಚಾಲಕ ಪೂರನ್ ವರ್ಮಾ ಅವರ ನೇತೃತ್ವದಲ್ಲಿ ಶ್ರೀ ಜನಾರ್ದನ ದೇವ ಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ವೇದಮೂರ್ತಿ ಶ್ರೀನಿವಾಸ ಹೊಳ್ಳರು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಶ್ರೀ ಸಾಯಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು.
ಪಾದಯಾತ್ರೆಯಲ್ಲಿ ಚೆಂಡೆ,ಯಕ್ಷಗಾನ ವೇಷಗಳು,ಪೌರಾಣಿಕ ದೃಶ್ಯಗಳು,ಭಜನಾತಂಡಗಳು,ಕೊಂಬು,ಕಹಳೆ,ಜಾಗಟೆ, ಸಮವಸ್ತ್ರಧಾರಿಗಳು ಪಂಚಾಕ್ಷರಿ ನಾಮಸ್ಮರಣೆಯೊಂದಿಗೆ ಸಾಗಿ ಬಂದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಎಲ್. ಎಚ್ .ಮಂಜುನಾಥ್, ಮುಗುಳಿ ನಾರಾಯಣ ರಾವ್, ವಿವೇಕ್ ವಿನ್ಸೆನ್ಟ್ ಪಾಯಸ್ ,ರಾಮಸ್ವಾಮಿ,ಮೋಹನ ಶೆಟ್ಟಿಗಾರ್, ಧನಂಜಯ ರಾವ್,ಅರುಣಕುಮಾರ್ ,ಪರಾರಿ ವೆಂಕಟ್ರಮಣ ಹೆಬ್ಬಾರ್,ಪುಷ್ಪಾವತಿ ಆರ್.ಶೆಟ್ಟಿ, ಮೋಹನ ಕುಮಾರ್, ರಾಜೇಶ್ ಪೈ, ರವಿಕುಮಾರ್ ಬರಮೇಲು,ಜಯಂತ್ ಕೋಟ್ಯಾನ್ ,ಶಾರದಾ ರೈ,ಶಶಿಧರ ಶೆಟ್ಟಿ,ರವಿ ಚಕ್ಕಿತ್ತಾಯ,ಎಸ್.ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ ಸತೀಶ್ಚಂದ್ರ,ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ.ವೈ ,ಉಪನ್ಯಾಸಕರು,ವಿದ್ಯಾರ್ಥಿಗಳು,ಬದುಕು ಕಟ್ಟೋಣ ಬನ್ನಿ ತಂಡದ ಕಾರ್ಯಕರ್ತರು, ಭಜನಾ ಮಂಡಳಿ ಸದಸ್ಯರು,ಮಹಿಳೆಯರು, ಶೌರ್ಯ ವಿಪತ್ತು ತಂಡದ ಕಾರ್ಯಕರ್ತರು ಪಾದಯಾತ್ರೆ ಮೆರವಣಿಗೆಯಲ್ಲಿ ಸುಮಾರು 15 ಸಹಸ್ರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಡಾ ಶ್ರೀಧರ ಭಟ್ ಪಾದಯಾತ್ರೆಯ ಉದ್ದೇಶ, ಯೋಜನೆಯ ಕುರಿತು ಮಾತನಾಡಿ ದುಷ್ಟ ಶಕ್ತಿಗಳನ್ನು ಮರ್ದಿಸಿ ಶಿಷ್ಟ ಶಕ್ತಿಗಳನ್ನು ಉದ್ದೀಪನಗೊಳಿಸುವ ಭಕ್ತಿ ಹಾಗು ಶಕ್ತಿಯ ಭಗವದರ್ಪಣೆಯ ಹಿನ್ನೆಲೆಯಲ್ಲಿ ಪ್ರಾರಂಭಿಸಿದ ಪಾದಯಾತ್ರೆ ಹತ್ತನೇ ವರ್ಷದಲ್ಲಿ ಇಡೀ ನಾಡಿನ ಭಕ್ತರು ಪಾಲ್ಗೊಂಡಿದ್ದಾರೆ.
ಉಜಿರೆ ಹಾಗು ಧರ್ಮಸ್ಥಳದ ನಡುವೆ ಅವಿನಾಭಾವ ಸಂಬಂಧವಿದೆ. ನಾಡು ಹಾಗು ರಾಷ್ಟ್ರದ ಪ್ರಗತಿಗೆ ಭಕ್ತಿ ಭಜನೆ ಪ್ರೇರಕವಾಗಲಿ ಎಂದು ಆಶಿಸಿ ಪಾದಯಾತ್ರೆಗೆ ಶುಭ ಕೋರಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಾದಯಾತ್ರೆಯಲ್ಲಿ ಸಾಗಿಬಂದ ಭಕ್ತರನ್ನು ಮಹಾದ್ವಾರದ ಬಳಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.