ಬೆಳ್ಳಾರೆ: ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34 ವ.) ಎಂದು ಗುರುತಿಸಲಾಗಿದೆ.
ಗೋಪಾಲಕೃಷ್ಣ ಅವರು ತನ್ನ ಮನೆಯ ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು ಒಬ್ಬಂಟಿಯಾಗಿ ತೆರಳಿದ್ದು, ವಾಪಾಸು ಬಾರದೇ ಇದ್ದುದರಿಂದ ಮನೆಯವರು ಕೆರೆಯ ಬಳಿ ಹೋಗಿ ನೋಡಿದಾಗ ಗೋಪಾಲಕೃಷ್ಣನ ಚಪ್ಪಲಿ ಕೆರೆಯ ನೀರಿನಲ್ಲಿ ತೇಲುತ್ತಿತ್ತು. ಸಂಶಯಗೊಂಡು ಮರದ ದೋಂಟಿಯೊಂದನ್ನು ಕೆರೆಯ ನೀರಿಗೆ ಹಾಕಿ ನೋಡಿದಾಗ ಗೋಪಾಲಕೃಷ್ಣನ ಅಂಗಿ ದೋಂಟಿಯ ಕೊಕ್ಕೆ ಸಿಕ್ಕಿಕೊಂಡಿದೆ.
ಮೃತರ ತಂದೆ ಮೋನಪ್ಪ ನಾಯ್ಕ ಅವರು ಕೂಡಲೇ ಸಹೋದರರನ್ನು ಕರೆದು ಮೃತದೇಹವನ್ನು ಮೇಲಕ್ಕೆತ್ತಿ ಆಟೋ ರಿಕ್ಷಾವೊಂದರಲ್ಲಿ ಕೆಯ್ಯೂರುವರೆಗೆ ತೆಗೆದುಕೊಂಡು ಬಂದು ಅಲ್ಲಿಂದ ಅಂಬ್ಯುಲೆನ್ಸ್ ವಾಹನವೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಗೋಪಾಲಕೃಷ್ಣನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.