ಬಂಟ್ವಾಳ: ಯಾವಾಗ್ಲೂ ಸ್ಟ್ರಿಕ್ಟ್ ಆಗಿರೋ ಆಡಳಿತಾಧಿಕಾರಿ ಗುತ್ತಿನ ಯಜಮಾನನಾಗಿದ್ದರೆ, ಮುಖ್ಯಶಿಕ್ಷಕಿ ಕೋಳಿ ಹಿಡಿದು ಅಜ್ಜಿಯಾಗಿದ್ದರೆ, ಶಿಕ್ಷಕರೊಬ್ಬರು ಟೀಚರ್ ಗೆರಸೆ ಹಿಡಿದಿದ್ದರು, ಇನ್ನಿಬ್ಬರು ಶಿಕ್ಷಕರು ಹಿಡಿಸೂಡಿ ಮಾಡುತ್ತಿದ್ದರು.
ಡ್ರಾಯಿಂಗ್ ಮಾಸ್ಟ್ರು ಮುಂಡಾಸು ಕಟ್ಟಿ ಅಡಿಕೆಯ ಸಿಪ್ಪೆ ಸುಲಿಯುತ್ತಿದ್ದು.. ಒಬ್ಬೊಬ್ಬರು ಒಂದೊಂದು ವೇಷತೊಟ್ಟಿದ್ದರು. ಒಟ್ಟಿನಲ್ಲಿ ಕ್ಲಾಸಿಗೆ ಬಂದು ಪಾಠ ಮಾಡ್ತಿದ್ದ ಶಿಕ್ಷಕರೆಲ್ಲಾ ವೇಷ ತೊಟ್ಟುಅಭಿನಯದಲ್ಲಿ ತೊಡಗಿದ್ದು, ಹಲವರು ಡ್ಯಾನ್ಸಿಂಗ್ ಮೂಡ್ ನಲ್ಲಿದ್ರು.
ಹೌದು ಈ ದೃಶ್ಯಾವಳಿಗಳೆಲ್ಲಾ ಕಂಡು ಬಂದದ್ದು. ಬಂಟ್ವಾಳ ತಾಲೂಕಿನ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ. ಮಕ್ಕಳ ದಿನಾಚರಣೆಗೆ ಮಕ್ಕಳೆಲ್ಲಾ ವೇಷ ತೊಟ್ಟು ಸಂಭ್ರಮಿಸಿದಂತೆ, ಶಿಕ್ಷಕರ ದಿನದ ಅಂಗವಾಗಿ ಶಿಕ್ಷಕರು ವೇಷ ತೊಟ್ಟು, ಒಂದಷ್ಟು ಹೊತ್ತು ಮಕ್ಕಳಿಗೆ ಸಂಭ್ರಮ ನೀಡಿದ್ದು, ಮಕ್ಕಳೆಲ್ಲರೂ ಸಂತಸ ಪಟ್ಟರು.
ಜಾನಪದ ಹಾಡಿನ ಮೂಲಕ ಶಿಕ್ಷಕರು ಹಳ್ಳಿಯ ಬದುಕನ್ನು ಸುಂದರವಾಗಿ ಕಟ್ಟಿಕೊಟ್ಟರು.ಜೊತೆಗೆ ಸೆಮಿಕ್ಲಾಸಿಕಲ್ ಹಾಡಿನ ನೃತ್ಯ, ಕೇರಳದ ಸುಗ್ಗಿ ನೃತ್ಯ, ದೀಪ ಹಿಡಿದ ನೃತ್ಯ, ವೈಯುಕ್ತಿಕ ಗೀತೆ, ಸಮೂಹ ಗೀತೆಗಳು ಗಮನಸೆಳೆದವು.
ಶಾಲಾ ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ, ಟ್ರಸ್ಟಿ ಸುಭಾಶಿಣಿ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ಎಂ.ವೀರಪ್ಪ ನಾಯ್ಕ್ ಕಾರ್ಯಕ್ರಮ ಕ್ಕೆ ಸಾಕ್ಷಿಗಳಾಗಿದ್ದರು. ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ವಿ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಅಪರಾಹ್ನದ ವರೆಗೆ ನಡೆದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು.