ಬಂಟ್ವಾಳ: ಕೋವಿಡ್ ಸಂದರ್ಭದಲ್ಲಿ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರ ಸಿಬ್ಬಂದಿಗಳು ಜೀವದ ಹಂಗು ತೊರೆದು ಸೇವೆ ನೀಡಿದ ಸ್ಮರಣೀಯ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಅವರು ರಾಯಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಅಧಿಕಾರಿಗಳು ಉತ್ತಮ ಸೇವೆ ಮಾಡಿದಾಗ ಜನರು ಯಾವತ್ತೂ ಗುರುತಿಸುತ್ತಾರೆ ಎಂದು ಅವರು ತಿಳಿಸಿದರು. ಈ ಆಸ್ಪತ್ರೆಯ ವೈದ್ಯಾಧಿಕಾರಿಗಳ ಕೊಠಡಿಗೆ ಹೆಚ್ಚುವರಿ 3 ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಕೋವಿಡ್ ಬಳಿಕ ತಾಲೂಕಿನ ಎಲ್ಲಾ ಆಸ್ಪತ್ರೆಯ ಸೌಕರ್ಯಗಳ ನ್ನು ಸುಸಜ್ಜಿತಗೊಳಿಸುವ ಕೆಲಸ ನಡೆದಿದೆ. ಮೂಲಭೂತ ಸೌಕರ್ಯಗಳ ಜೊತೆ ವೈದ್ಯರ ಕೊರತೆಯಾಗದಂತೆ ಭರ್ತಿ ಮಾಡಿ ಜನರ ಆರೋಗ್ಯ ರಕ್ಷಣೆ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದೇವೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಡಯಾಲಿಸಿಸ್, ಆಕ್ಸಿಜನ್ ಪ್ಲಾಂಟ್ ಜೊತೆ ರೋಗಿಗಳಿಗೆ ದಿನದ 24 ಗಂಟೆಯೂ ಸೇವೆ ನೀಡುವ ಕೆಲಸ ನಡೆಯುತ್ತಿದೆ.
ಇದರ ಜೊತೆಗೆ ಪ್ರಪ್ರಥಮವಾಗಿ ಬಂಟ್ವಾಳ ದಲ್ಲಿ ಸಂಚಾರಿ ಚಿಕಿತ್ಸಾ ಐಸಿಯು ಬಸ್ ನ್ನು ಕ್ಷೇತ್ರ ದ ಜನರ ಆರೋಗ್ಯ ರಕ್ಷಣೆ ಗಾಗಿ ವಿಶೇಷ ಮುತುವರ್ಜಿಯಿಂದ ಅನುಷ್ಠಾನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ರತ್ನಾ ಆನಂದ, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಮನಾಥ ರಾಯಿ,ರವೀಂದ್ರ, ಗ್ರಾ.ಪಂ.ಸದಸ್ಯರಾದ ಸಂತೋಷ್ ರಾಯಿಬೆಟ್ಟು,ಉಷಾ,ಗುಣವತಿ,ದಿನೇಶ್ ಶೆಟ್ಟಿ, ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮನೋನ್ಮಯಿ ಉಪಸ್ಥಿತರಿದ್ದರು.
ಸಿಬ್ಬಂದಿ ಬಸವರಾಜ ಸ್ವಾಗತಿಸಿ, ವಂದಿಸಿದರು.