ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಬಂಟ್ವಾಳ ಮತ್ತು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ 2022-23 ನೇ ಸಾಲಿನ ಜಿಲ್ಲಾ ಮಟ್ಟದ ” ಸಾವಯವ ಸಿರಿ” ಮಾಹಿತಿ ಶಿಬಿರವು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ| ಪ್ರಭಾಕರ್ ಭಟ್ ರವರು ಮಾತನಾಡಿ, ಭಾರತ ದೇಶ ಕೃಷಿ ಮತ್ತು ಋಷಿ ಪರಂಪರೆಯ ಮೂಲಕ ಬೆಳೆದುಬಂದಿದ್ದು, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಮತ್ತು ಯೋಚನೆಗಳು ಪರಸ್ಪರ ಸಂಬಂಧ ಹೊಂದಿದೆ.
ಪರಿಸರವೇ ನಮ್ಮ ಉಸಿರಾಗಿದ್ದು, ರಾಸಾಯನಿಕ ಮುಕ್ತವಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತುನೀಡಬೇಕು ಎಂದವರು ಕರೆ ನೀಡಿದರು.
ಕಾರ್ಯಕ್ರಮ ವನ್ನು ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷ ಆನಂದ ಎ.ಯವರು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕೃಷಿ ಯಿಂದ ಯುವ ಜನತೆ ಹಿಂದೆ ಸರಿಯುತ್ತಿದ್ದು, ಆರ್ಥಿಕ ವ್ಯವಸ್ಥೆ ಗೆ ದೊಡ್ಡದಾದ ಹೊಡೆತ ಬೀಳಲಿದೆ, ಹೊಸ ತಂತ್ರಜ್ಞಾನದ ಜೊತೆಗೆ ಸಾವಯವ ಕೃಷಿಯಲ್ಲಿ ಯುವ ಪೀಳಿಗೆಗೆ ತೊಡಗಿಸಿ ಕೊಂಡಾಗ ಲಾಭಧಾಯಕ ಕೃಷಿಯನ್ನು ಮಾಡುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ಹೊಸ ರೂಪ ನೀಡಬಹುದು ಎಂದು ಅವರು ಹೇಳಿದರು.
ಸಣ್ಣ ಪುಟ್ಟ ಕಾರಣಗಳು ನೀಡಿ ಕೃಷಿಯಿಂದ ದೂರ ಸರಿಯುವ ಕ್ರಮ ಸರಿಯಲ್ಲ, ಇಲಾಖೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕೃಷಿಕರು ಮುಂದಾಗಬೇಕು.
ಸರಕಾರದ ಹಾಗೂ ಇಲಾಖೆಯ ಹೊಸ ಹೊಸ ರೀತಿಯ ಕ್ರಮವನ್ನು ಅನುಸರಿಸಿ ಸಾವಯವ ಕೃಷಿ ಮಾಡಿ ಎಂದು ಅವರು ಕೃಷಿಕರಿಗೆ ಉತ್ತೇಜನ ನೀಡಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಕೃಷಿ ಉಪನಿರ್ದೇಶಕಿ ಭಾರತಮ್ಮ ಜಿ.ಯು., ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಸಾವಯವ ಕೃಷಿ ಪರಿವಾರ ರಾಜ್ಯ ಕಾರ್ಯದರ್ಶಿ ಭೋಜ, ಶ್ರೀರಾಮ ವಿದ್ಯಾಕೇಂದ್ರದ ಸಾವಯವ ಕೃಷಿ ವಿಭಾಗದ ಟ್ರಸ್ಟ್ ನ ಪ್ರತಿನಿಧಿ ಚೆನ್ನಪ್ಪ ಆರ್.ಕೋಟ್ಯಾನ್, ಮಾಜಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಅಮ್ಟೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಾವಯವ ಕೃಷಿ ಪರಿಕಲ್ಪನೆ, ಸಾವಯವ ಕೃಷಿ ಏಕೆ? ತತ್ವಗಳು ಮತ್ತು ಮುಖ್ಯ ಅವಶ್ಯಕತೆ ಗಳು ವಿಚಾರದಲ್ಲಿ ವಿಜ್ಞಾನಿ ಡಾ| ನವೀನ್ ಕುಮಾರ್ ಬಿ.ಟಿ.ವಿಷಯ ಮಂಡನೆ ಮಾಡಿದರು.
ಸಾವಯವ ಕೃಷಿ ಪಶುಪಾಲನೆ ಸಮ್ಮಿಲನ ವಿಚಾರದಲ್ಲಿ ಹಾಗೂ ಉಪಕಸುಬುಗಳ ವಿಚಾರದಲ್ಲಿ ಮಂಗಳೂರು ಮುಖ್ಯ ಪಶುವೈದ್ಯಾಧಿಕಾರಿ ಡಾ| ವಸಂತ ಕುಮಾರ ಶೆಟ್ಟಿ , ಪಶು ವಿಜ್ಞಾನ ವಿಜ್ಞಾನಿ ಡಾ| ಶಿವಕುಮಾರ್ ಆರ್. ಬಂಟ್ವಾಳ ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರದೀಪ್ ಡಿ.ಸೋಜ ವಿಷಯ ಮಂಡನೆ ಮಾಡಿದರು.
ಮಣ್ಣು ಮತ್ತು ನೀರಿನ ಸಂರಕ್ಷಣೆ ಪದ್ದತಿ ಗಳು ಮತ್ತು ಮಳೆ ನೀರು ಕೊಯ್ಲು, ಪುನರ್ ನವೀಕರಿಸುವ ಶಕ್ತಿ ಮೂಲಗಳು- ಜೈವಿಕ ಅನಿಲ ಸ್ಥಾವರ, ಸೌರ ಶಕ್ತಿ ಹೊಗೆ ರಹಿತ ಒಲೆ ವಿಚಾರದಲ್ಲಿ ಡಾ| ಮಲ್ಲಿಕಾರ್ಜುನ ಎಲ್ ವಿಷಯ ಮಂಡನೆ ಮಾಡಿದರು. ಸಾವಯವ ಕೃಷಿಯಲ್ಲಿ ಕೀಟಗಳ ನಿರ್ವಹಣೆ – ಜೈವಿಕ ಪೀಡೆನಾಶಕಗಳು , ಪರಭಕ್ಷಕ ಮತ್ತು ಪರತಂತ್ರ ಜೀವಿಗಳು, ಸಾವಯವ ಕೃಷಿಯಲ್ಲಿ ರೋಗ ನಿರ್ವಹಣೆ ಬಗ್ಗೆ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ| ಕೇದಾರ್ ನಾಥ್ ವಿಷಯ ಮಂಡನೆ ಮಾಡಿದರು.
ಸಾವಯವ ಕೃಷಿ ವಿಭಾಗದ ಪ್ರತಿನಿಧಿ ಆರ್.ಚೆನ್ನಪ್ಪ ಕೋಟ್ಯಾನ್ ಅವರು ಸ್ವಾಗತಿಸಿ, ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ ವಂದಿಸಿದರು. ಜಿನ್ನಪ್ಪ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು.