ಬಂಟ್ವಾಳ: ಮಹಾತ್ಮ ಗಾಂಧೀಜಿಯವರ ಚಿಂತನೆಯಂತೆ ಈ ದೇಶ ವ್ಯಸನಮುಕ್ತ ದೇಶವಾಗಬೇಕು ಎನ್ನುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ಖಾವಂದರು ಸ್ಥಾಪಿಸಿರುವ ಜನಜಾಗೃತಿ ವೇದಿಕೆ ಸಾವಿರಾರು ಮಂದಿಯ ಪರಿವರ್ತನೆಗೆ ಕಾರಣವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬಂಟ್ವಾಳ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ಇದರ ವತಿಯಿಂದ ಗಾಂಧೀಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಭಾನುವಾರ ನಡೆದ ನವಜೀವನ ಸದಸ್ಯರ ಸಮಾವೇಶ ಮತ್ತು ಕೇಂದ್ರ ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟಗಳು ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಕ್ರಾಂತಿಯನ್ನೇ ಮಾಡಿದ್ದು, ವ ಈ ಇನ್ನುಮುಂದೆಯೂ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ನವಜೀವನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಚಿವ ರಮಾನಾಥ ರೈಯವರು ಮಾತನಾಡಿ, ಮಹಾತ್ಮಾ ಗಾಂಧೀಜಿ ವಿಶ್ವಕ್ಕೆ ಮಹಾತ್ಮರಾಗಿದ್ದರು. ಕುಡಿತ ಮಾಡಬಾರದೆಂದು ಬಹಳ ಪ್ರಯತ್ನ ಮಾಡಿದ್ದರು. ಅಂತರಾತ್ಮದಲ್ಲಿ ಗಾಂಧೀಜಿಯನ್ನು ಕಾಣಬೇಕು. ಪಾನನಿಷೇಧ ಮತ್ತು ಯಾರೂ ಮದ್ಯ ವ್ಯಸನಿಗಳಾಗಬಾರದು ಎನ್ನುವ ನಿಟ್ಟಿನಲ್ಲಿ ಶ್ರಮಿಸಿದ ಖಾವಂದರು, ಎಷ್ಟೋ ಜನ ಮದ್ಯ ವ್ಯಸನಿಗಳಾಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಯೋಜನೆಯ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯಮುಕ್ತರಾಗಿ ನವಜೀವನ ನಡೆಸುತ್ತಿರುವ ಗಿರಿಯಪ್ಪ ರವರು ಮಾತನಾಡಿ,ಮದ್ಯಪಾನ ದಿಂದ ಉದ್ಯೋಗ, ಮನೆ, ಕುಟುಂಬವನ್ನು ಕಳೆದುಕೊಂಡಿದ್ದೆ. ಆದರೆ ಈಗ ಕುಡಿತವನ್ನು ಬಿಟ್ಟು ಎಲ್ಲವನ್ನು ಮತ್ತೆ ಪಡೆದಿದ್ದೇವೆ. ಜೀವನ ಮತ್ತು ಜೀವವನ್ನು ಜನಜಾಗೃತಿ ವೇದಿಕೆ ಉಳಿಸಿದೆ, ಕುಡಿತದ ಅಭ್ಯಾಸದಿಂದ ಲಕ್ಷಾಧಿಪತಿಯಾಗಿದ್ದ ಮನುಷ್ಯ ಭಿಕ್ಷಾಧಿಪತಿಯಾಗುತ್ತಾರೆ. ಕುಡಿತ ಬಿಟ್ಟರೆ ಬಿಕ್ಷಾಧಿಪತಿ ಹೋಗಿ ಲಕ್ಷಾಧಿಪತಿ ಯಾಗುತ್ತಾರೆ ಇದಕ್ಕೆ ನಾನೇ ಉದಾಹರಣೆ ಎಂದರು.
ಯೋಜನೆಯ ಬಂಟ್ವಾಳ ಬಿಸಿಟ್ರಸ್ಟ್ ನಿರ್ದೇಶಕ ಸತೀಶ್ ಶೆಟ್ಟಿಯವರು ಬಂಟ್ವಾಳ ಕೇಂದ್ರ ಒಕ್ಕೂಟದ ಜವಾಬ್ದಾರಿಯನ್ನು ಚಿದಾನಂದ ರೈಯವರಿಗೆ ಹಸ್ತಾಂತರಿಸಿ ಮಾತನಾಡಿ, ಕರ್ನಾಟಕದ ೩೦ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಲ್ಲಿ ೬ ಲಕ್ಷ ೨೦ ಸಾವಿರ ಪ್ರಗತಿ ಬಂದು ಸ್ವಸಹಾಯಗುಂಪುಗಳಿದ್ದು, ೪೮ ಲಕ್ಷ ಕುಟುಂಬಗಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ರೊನಾಲ್ಡ್ ಡಿಸೋಜ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ರುಕ್ಮಯ ಪೂಜಾರಿ, ಕೈಯ್ಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ, ಪ್ರಕಾಶ್ ಕಾರಂತ, ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಆಳ್ವ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟ್ ಕೃಷ್ಣಕುಮಾರ್ ಪೂಂಜ, ವಿಶ್ರಾಂತ ಪ್ರೊಫೆಸರ್ ತುಕಾರಾಮ ಪೂಜಾರಿ, ಬಂಟ್ವಾಳ ಕೇಂದ್ರ ಒಕ್ಕೂಟ ಅಧ್ಯಕ್ಷ ಮಾಧವ ವಳವೂರು, ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅಲ್ಲಿಪಾದೆ, ಚಂದಪ್ಪ ಮೂಲ್ಯ, ಸದಾನಂದ ನಾವೂರ ಉಪಸ್ಥಿತರಿದ್ದರು. ಇದೇ ಸಂದರ್ಭ ಸರಕಾರಕ್ಕೆ ಶಾಸಕರ ಮೂಲಕ ಹಕ್ಕೊತ್ತಾಯ ಮಂಡನೆ, ನವಜೀವನ ನಡೆಸುತ್ತಿರುವ ಕುಟುಂಬಕ್ಕೆ ಅಟೋ ರಿಕ್ಷಾ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿದರು. ವಿಟ್ಲ ವಲಯ ಯೋಜನಾಧಿಕಾರಿ ಚೆನ್ನಪ್ಪ ಗೌಡ ವಂದಿಸಿದರು. ಶಿವರಂಜನ್ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.