ಬಂಟ್ವಾಳ: ಬಿಲ್ಲವರು ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ಸಂಘರ್ಷ ಇಲ್ಲದೆ ಒಟ್ಟಾಗಿರಬೇಕು ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ವಿಟ್ಲ ಮುಡ್ನೂರು ಕುಳ ಗ್ರಾಮದ ಬಿಲ್ಲವ ಸಂಘ (ರಿ) ಕುಂಡಡ್ಕ ಇವರು ಕುಂಡಡ್ಕ ಗುರುನಗರ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ” ಇದರ ಉದ್ಘಾಟನಾ ಸಮಾರಂಭ ಮತ್ತು ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕು, ಸಮಾಜ ಕಟ್ಟುವಾಗ ಯಾವುದೇ ಯೋಜನೆ ಒಂದೇ ಸಮಾಜಕ್ಕೆ ಸೀಮಿತ ಮಾಡಲು ಆಗಲ್ಲ, ಸಾಮೂಹಿಕ ನ್ಯಾಯಕ್ಕೆ ಒತ್ತು ಕೊಡುವ ಅಗತ್ಯವಿದೆ. ಮುಂದಿನ ಬಜೆಟ್ ನಲ್ಲಿ ನಾರಾಯಣ ಗುರು ನಿಗಮ ಘೋಷಣೆ ಆಗಲಿದೆ ಎಂದರು.
ಕುಂಡಡ್ಕ ಬಿಲ್ಲವ ಸಂಘ (ರಿ.)ದ ಅಧ್ಯಕ್ಷ ದೂಮಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಮಹಾಲಿಂಗ ನಾಯ್ಕ, ದೈವ ನರ್ತಕ ರಾಮಣ್ಣ ಕುಳ, ಸಭಾಭವನಕ್ಕೆ ಸ್ಥಳ ದಾನಿಗಳಾದ ಸಂಜೀವ ಪೂಜಾರಿ ದಂಪತಿಗಳನ್ನು, ಕಟ್ಟಡ ಸಮಿತಿಯ ಸಂಚಾಲಕರಾದ ಯತೀಶ್ ಪೂಜಾರಿ ದಂಪತಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮುರುವ ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗೂರೂಜಿ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ಸ್ ಜಿಲ್ಲಾ ಪೂರ್ವ ರಾಜ್ಯಪಾಲ ಲಯನ್ ಡಾ| ಗೀತಪ್ರಕಾಶ್ ಎ,, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಕೆ ಬಿ ಉದ್ಯಮಿ ರಾಧಾಕೃಷ್ಣ ಪೈ, ಜಿಲ್ಲಾ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಚನ್ನಪ್ಪ ಗೌಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಅಧಿಕಾರಿ ಸಚಿನ್ ಕುಮಾರ್, ಲೋಕೇಶ್ ತಂತ್ರಿಗಳು, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ, ವಿಟ್ಲ ಅಧ್ಯಕ್ಷ ಸಂಜೀವ ಪೂಜಾರಿ ನಿತ್ಯ, ಉದ್ಯಮಿಗಳಾದ ಕೃಷ್ಣ ಎಂ ಪೂಜಾರಿ, ಸಂತೋಷ್ ಜೀವನ್, ಇಂಜಿನಿಯರ್ ಜಗದೀಶ್ ನಿಂಬಾಳ, ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸರಿತಾ, ವಲಯಾಧ್ಯಕ್ಷೆ ಪ್ರಮೀಳಾ ಉಪಸ್ಥಿತರಿದ್ದರು .
ಜೀವನ್ ಕೌಶಿಕ್ ಭವಿಷ್ಯ ಪ್ರಾರ್ಥಿಸಿ, ಬಿಲ್ಲವ ಸಂಘ (ರಿ.) ಕುಂಡಡ್ಕ ಇದರ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಎಸ್. ಕೆ., ಸಂಘದ ಪ್ರಾಸ್ತಾವಿಕ ವರದಿಯನ್ನು ವಾಚಿಸಿದರು, ಸಂಘದ ನಿಕಟಪೂರ್ವ ಅಧ್ಯಕ್ಷ ವಿಠಲ ಪೂಜಾರಿ ಕುಂಡಡ್ಕ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ಕೆ ಟಿ ಆನಂದ ಧನ್ಯವಾದವಿತ್ತರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು .