ಬಂಟ್ವಾಳ: ಸಹಕಾರಿ ಕ್ಷೇತ್ರದ 98% ಕೃಷಿಕರೇ ಆಗಿದ್ದು, ಕೃಷಿಯ ಕುರಿತು ಋಣಾತ್ಮಕ ಅಂಶಗಳನ್ನು ಬಿಟ್ಟು ಕೃಷಿಯಲ್ಲಿ ತೊಡಗಬೇಕಿದೆ ಎಂದು ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ರವಿವಾರ ಒಡ್ಡೂರು ಫಾರ್ಮ್ಸ್ ನಲ್ಲಿ ಬಂಟ್ವಾಳ ಬಿಜೆಪಿ ಸಹಕಾರಿ ಪ್ರಕೋಷ್ಠದ ವತಿಯಿಂದ ಸಹಕಾರಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ನನ್ನನ್ನು ಕೃಷಿಕರೇ ಅಲ್ಲ ಉದ್ಯಮಿ ಎಂದು ಸಾಕಷ್ಟು ಆರೋಪ ಮಾಡುತ್ತಿದ್ದಾರೆ.ಆದರೆ ನಾನು ಸರಕಾರಕ್ಕೆ ಲಕ್ಷಾಂತರ ರೂ.ತೆರಿಗೆ ಪಾವತಿಸಿ ಉದ್ಯಮ ನಡೆಸುತ್ತಿದ್ದೇನೆ. ರಾಜಕೀಯ ನನ್ನ ವ್ಯಾಪಾರ ಅಲ್ಲವಾಗಿದ್ದು,ವಿರೋಧಿ ಗಳು ಏನೇ ಹೇಳಿದರು ಸಿದ್ಧಾಂತ ಬಿಟ್ಟು ರಾಜಕೀಯ ಮಾಡುವುದಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಪರಸ್ಪರ ಸಹಬಾಳ್ವೆಯಿಂದ ಇರುವುದೇ ಸಹಕಾರವಾಗಿದ್ದು, ಜನರ ಸೇವೆಗಾಗಿ ಇರುವ ಕ್ಷೇತ್ರವಾಗಿದೆ. ತಾಲೂಕಿನಲ್ಲಿ ೨೯ ಹಾಗೂ ಬಂಟ್ವಾಳದಲ್ಲಿ ೨೦ ವ್ಯವಸಾಯ ಸಂಘಗಳಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸಹಕಾರಿ ಒಟ್ಟಾಗಿ ಶಾಸಕ ರಾಜೇಶ್ ನಾಯ್ಕ್ ಅಭಿವೃದ್ಧಿಯನ್ನು ಮೆಚ್ಚಿ ಬಿಜೆಪಿಯನ್ನು ಬೆಂಬಲಿಸಬೇಕಿದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ಸಹಕಾರದ ಜೀವಂತಿಕೆಗೆ ರಾಜಕಾರಣ ಸ್ಪರ್ಶ ಬೇಕು. ಜಾತಿ, ಧರ್ಮ ಯಾವುದೇ ನೋಡದೆ ಶಾಸಕ ರಾಜೇಶ್ ನಾಯ್ಕ್ ಅವರು ಬಂಟ್ವಾಳ ಕ್ಷೇತ್ರದ ಪ್ರತಿಯೊಬ್ಬರಿಗೂ ಅಭಿವೃದ್ಧಿಯ ಸ್ಪರ್ಶ ನೀಡಿದ್ದಾರೆ. ಆತ್ಮನಿರ್ಭರ ಭಾರತದ ಮೋದಿ ಕಲ್ಪನೆಗೆ ಪೂರಕವಾಗಿ ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಬಂಟ್ವಾಳ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿಸೋಜ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಸುಧಾಕರ ರೈ, ಸವಿತಾ ಶೆಟ್ಟಿ, ಸಹಕಾರಿ ಪ್ರಕೋಷ್ಟದ ಸಹಸಂಚಾಲಕ ಪುಷ್ಪರಾಜ್ ಚೌಟ, ಸಹಕಾರ ಭಾರತಿ ಬಂಟ್ವಾಳ ಅಧ್ಯಕ್ಷ ವಿಶ್ವನಾಥ ಎಂ., ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ನಬಾರ್ಡ್ ನ ನಿವೃತ್ತ ಅಧಿಕಾರಿ ವೆಂಕಟಸ್ವಾಮಿ ಉಪನ್ಯಾಸ ನೀಡಿದರು. ಸಹಕಾರಿ ಪ್ರಕೋಷ್ಟದ ಸಂಚಾಲಕ ಜಯಶಂಕರ ಬಾಸ್ರಿತ್ತಾಯ ಸ್ವಾಗತಿಸಿದರು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.