ತಲಪಾಡಿ: ಎಸ್ ಡಿಐ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಬೆಂಬಲಿತ ಸದಸ್ಯ ಮಹಮ್ಮದ್, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಜೊತೆಗಿನ ಫೋನ್ ಆಡಿಯೋ ವೈರಲ್ ಆಗಿದೆ.
ಎಸ್ಡಿಪಿಐಗೆ ಮತ ಹಾಕಿದ ಬಗ್ಗೆ ಬಿಜೆಪಿ ಅಧ್ಯಕ್ಷರ ಬಳಿ ಕ್ಷಮೆ ಯಾಚನೆ ಮಾಡಿದ ಮಹಮ್ಮದ್, ಸಾರ್ ನಾನು ಗೊಂದಲದಿಂದ ಹಾಕಿ ಆಗಿದೆ. ದೇವರಾಣೆ ಅದು ಹೇಗೆ ಆಯ್ತು ಅನ್ನೋದು ಗೊತ್ತಿಲ್ಲ, ಇದರಿಂದ ಪಶ್ಚಾತ್ತಾಪ ಆಗಿದೆ. ಸಾರ್ ದಯವಿಟ್ಟು ನನ್ನನ್ನ ಕ್ಷಮಿಸಿ. ನಾನು ಪಕ್ಷದ ಮೇಲೆ ಅಭಿಮಾನ ಇಟ್ಟವ’. ನಾನು ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿಲ್ಲ ಸಾರ್. ದಯವಿಟ್ಟು ಕ್ಷಮಿಸಿ ಸಾರ್ ನನ್ನಿಂದ ತಪ್ಪಾಗಿದೆ. ಏನಾಗಿದೆ ಅಂತ ಗೊತ್ತಾಗ್ತಾ ಇಲ್ಲ ಸಾರ್ ಸತ್ಯ ಹೇಳ್ತಾ ಇದೀನಿ. ನಾನು ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆ ಮೇಲೆ ಬಿಪಿ ಜಾಸ್ತಿಯಾದ ಕಾರಣ ನನ್ನ ಮಕ್ಕಳು ಆಸ್ಪತ್ರೆಗೆ ದಾಖಲಿಸಿದ್ರು. ನನಗೆ ಬಿಜೆಪಿ ಅಂದ್ರೆ ಅಭಿಮಾನ ಇದೆ. ನಾನು ಯಾವತ್ತೂ ಬಿಜೆಪಿ ಬಿಡಲ್ಲ ಎಂದು ತುಳುವಿನಲ್ಲಿ ಗೋಗರೆದ ಆಡಿಯೋ ಸಂಭಾಷಣೆ ವೈರಲ್ ಆಗಿದೆ.
ತಲಪಾಡಿ ಗ್ರಾ.ಪಂ ಆಡಳಿತದಲ್ಲಿ ಒಟ್ಟು 24 ವಾರ್ಡುಗಳಿತ್ತು. ಇದರಲ್ಲಿ 13 ಬಿಜೆಪಿ ಬೆಂಬಲಿತ ಸದಸ್ಯರು, 10 ಎಸ್ ಡಿಪಿಐ ಬೆಂಬಲಿತ ಸದಸ್ಯರು ಹಾಗೂ ಓರ್ವ ಕಾಂಗ್ರೆಸ್ ಸದಸ್ಯರಿದ್ದರು. ಕಾಂಗ್ರೆಸ್ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್ ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು.
ಹೀಗಾಗಿ ಬಹುಮತದ ಕಾರಣ ಬಿಜೆಪಿ ಸದಸ್ಯ ಸತ್ಯರಾಜ್ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರು ಬಿಜೆಪಿ ಬೆಂಬಲಿತರಿಂದ ಎಸ್ ಡಿಪಿಐಗೆ ಬೆಂಬಲ ಸಿಕ್ಕಿದೆ. ಮಹಮ್ಮದ್ ಫಯಾಝ್ ಮತ್ತು ಮಹಮ್ಮದ್ ಎಂಬ ಬಿಜೆಪಿ ಬೆಂಬಲಿತರಿಂದ ಎಸ್ ಡಿಪಿಗೆ ಅಡ್ಡ ಮತದಾನ ಆಗಿದೆ. ಇದರಿಂದ ಎಸ್ಡಿಪಿಐ ಇಸ್ಮಾಯಿಲ್ ಮತ್ತು ಬಿಜೆಪಿ ಸತ್ಯರಾಜ್ ನಡುವೆ ಸಮಬಲ ಆಗಿದ್ದು, ಕೊನೆಗೆ ಚೀಟಿ ಎತ್ತುವ ಮೂಲಕ ಎಸ್ಡಿಪಿಐನ ಇಸ್ಮಾಯಿಲ್ ಅಧ್ಯಕ್ಷ ಪಟ್ಟ ಸಿಕ್ಕಿದೆ.