ಬೆಳ್ತಂಗಡಿ: ಭಾರತದ ಜಿ20 ಅಧ್ಯಕ್ಷತೆಯ ಭಾಗವಾಗಿ ಆಯೋಜಿಸಲಾದ ಚೇಂಜ್ಮೇಕರ್ 20 ಶೃಂಗಸಭೆಯ ಲಿಂಗ ಸಮಾನತೆ ಮತ್ತು ಮಹಿಳಾ ಸಶಕ್ತೀಕರಣ ಕುರಿತಾಗಿ ಆ. 16ರಂದು ನಡೆದ ಸಮಾವೇಶದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿದರು.
ಉತ್ತಮ ಶಿಕ್ಷಣ ಪಡೆದ ಮತ್ತು ಅನುಭವಿ ಮಹಿಳೆಯರಿಂದ ಸಮಾಜ, ದೇಶ ಅಭಿವೃದ್ಧಿಯಾಗಲು ಹೇಗೆ ಸಾಧ್ಯ ಎಂಬುದನ್ನು ಹೆಗ್ಗಡೆ ಅವರು ವಿವರಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಹಾಜರಿದ್ದರು.
ಹೆಗ್ಗಡೆಯವರ ಭಾಷಣದ ಅನಂತರದ ಪ್ರಶ್ನೋತ್ತರದಲ್ಲಿ ಬಹಳಷ್ಟು ಆಸಕ್ತರು ಹೆಗ್ಗಡೆಯವರಲ್ಲಿ ಮಹಿಳೆಯ ಸಬಲೀಕರಣದ ಕುರಿತು ಕೇಳಿದ ಪ್ರಶ್ನೆಗಳಿಗೆ, ‘ಎಲ್ಲ ರಂಗಗಳಲ್ಲಿ ಮಹಿಳೆಯರನ್ನು ಸಶಕ್ತೀಕರಣಗೊಳಿಸುವುದು ಪ್ರಸ್ತುತ ಆದ್ಯತೆಯಾಗಿರಬೇಕು ಎಂದು ನಾನು ಹೇಳಲು ಬಯಸುತ್ತೇನೆ’ ಎಂದು ಸೂಕ್ತ ಉತ್ತರವನ್ನು ಹೆಗ್ಗಡೆಯವರು ನೀಡಿದರು.