ಬಂಟ್ವಾಳ: ವಿಧಾನಸಭಾ ಚುನಾವಣೆ ಗುಂಗಿನಲ್ಲಿದ್ದ ಎಲ್ಲರೂ ಇದೀಗ ಫಲಿತಾಂಶದ ಕುರಿತ ಚರ್ಚೆಯಲ್ಲಿ ಮುಳುಗಿದ್ದರೆ, ಇತ್ತ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ – ಎಸ್ ಡಿಪಿಐ ಮೈತ್ರಿ ಆಡಳಿತದ ಮೊದಲ ಹಂತದ 20 ತಿಂಗಳ ಅವಧಿಯು ಪೂರ್ಣಗೊಂಡಿದ್ದು, ಆಡಳಿತಾಧಿಕಾರಿಯವರ ನೇಮಕ ಇನ್ನು ಆಗಿಲ್ಲ, ಬಂಟ್ವಾಳ ಪುರಸಭೆಯಲ್ಲಿ 12 ಸದಸ್ಯ ಬಲಹೊಂದಿರುವ ಕಾಂಗ್ರೆಸ್, 4 ಸದಸ್ಯರಿರುವ ಎಸ್ ಡಿ ಪಿ ಐ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.ಬಿಜೆಪಿ ಇಲ್ಲಿ 11 ಮಂದಿ ಸದಸ್ಯರನ್ನು ಮಾತ್ರ ಹೊಂದಿದೆ.
ಪುರಸಭೆಯ ಐದುವರ್ಷದ ಜನಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಪ್ರಸ್ತುತ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಹಾಗೂ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಅವರ ಮೊದಲ 20 ತಿಂಗಳ ಅಂದರೆ ಎರಡೂವರೆ ವರ್ಷದ ಆಡಳಿತಾವಧಿ ಮೇ.7 ರಂದು ಮುಗಿದಿದ್ದು, ಮುಂದಿನ 20 ತಿಂಗಳ ಅಧ್ಯಕ್ಷ- ಉಪಾಧ್ಯಕ್ಷರು ಯಾರು ಅಗಲಿದ್ದಾರೆ ಎಂಬುದಕ್ಕೆ ಹೊಸ ಮೀಸಲಾತಿ ಪ್ರಕಟವಾಗುವವರೆಗೆ ಕಾಯಬೇಕಾಗಿದೆ.
ಸದ್ಯ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಕ್ರಿಯೆಗಳೆಲ್ಲಾ ಪೂರ್ಣಗೊಂಡು ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ಹಂತದಲ್ಲಿದೆ.ಆ ಬಳಿಕವೇ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟವಾಗಬೇಕಾಗಿದೆ.
ಜಿಲ್ಲಾಧಿಕಾರಿಯವರು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಅವಧಿ ಮುಗಿದಿದ್ದರೂ, ಬಂಟ್ವಾಳ ಪುರಸಭೆಗೆ ಇನ್ನೂ ಆಡಳಿತಾಧಿಕಾರಿ ಯವರ ನೇಮಕವಾಗಿಲ್ಲ ಎಂದು ತಿಳಿದು ಬಂದಿದೆ.
ಬಹುತೇಕ ಸೋಮವಾರ ( ಮೇ. ೧೫ )ದಂದು ಮಂಗಳೂರು ಸಹಾಯಕ ಕಮಿಷನರ್ ಅವರು ಆಡಳಿತಾಧಿಕಾರಿಯಾಗಿ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ನಡುವೆ ಪಕ್ಕದ ವಿಟ್ಲ ಪಟ್ಟಣ ಪಂಚಾಯತ್ ಸಹಿತ ರಾಜ್ಯದ ಕೆಲ ಪುರಸಭೆ, ಪಟ್ಟಣಪಂಚಾಯತ್ ಗೆ ಚುನಾವಣೆ ನಡೆದು ವರ್ಷ ಕಳೆದರೂ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗದೆ ಜನಪ್ರತಿನಿಧಿಗಳ ಆಡಳಿತ ಇನ್ನು ಶುರುವಾಗಿಲ್ಲ ಎಂಬುದೇ ಗಮನಾರ್ಹ ಸಂಗತಿ, ಇಲ್ಲಿ ಜನಪ್ರತಿನಿಧಿಗಳಿದ್ದರೂ ಅಧಿಕಾರ ಮಾತ್ರ ಆಡಳಿತಾಧಿಕಾರಿಗಳ ಕೈಯಲ್ಲಿದೆ.ಬಂಟ್ವಾಳ ಪುರಸಭೆಯಲ್ಲು ಇದೇ ರೀತಿ ಅಗಬಹುದೇ ಎಂಬ ಅನುಮಾನ ಕೆಲ ಸದಸ್ಯರನ್ನು ಈಗ ಕಾಡಿದೆ.
ಹಾಲಿ ಅಧ್ಯಕ್ಷ,ಉಪಾಧ್ಯಕ್ಷರು ಇನ್ನು ಮುುಂದೆ ಎರಡೂವರೆ ವಷ೯ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಅಸ್ತಿತ್ವಕ್ಕೆ ಬಾರದ ಸ್ಥಾಯಿ ಸಮಿತಿ:
ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಎರಡೂವರೆ ವರ್ಷದ ಆಡಳಿತಾವಧಿಯಲ್ಲಿ ಸ್ಥಾಯಿಸಮಿತಿ ಅಸ್ತಿತ್ವಕ್ಕೆ ಬಾರದಿರುವುದು ವಿಶೇಷವಾಗಿದೆ.ಈ ಹಿಂದೆ ವಸಂತಿ ಚಂದಪ್ಪ ಅವರು ಅಧ್ಯಕ್ಷರಾಗಿದ್ದಾಗಲು ಎರಡೂವರೆ ವರ್ಷ ಸ್ಥಾಯಿಸಮಿತಿಯೇ ಇರಲಿಲ್ಲ, ಬಂಟ್ವಾಳ ಪುರಸಭೆಯಲ್ಲಿ ಇದೊಂದು ಹೊಸದಾಖಲೆಯಾಗಿದೆ.
ಮುಂದೇನು..?
ಕರ್ನಾಟಕ ವಿಧಾನಸಭೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ – ಎಸ್ ಡಿಪಿಐ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದು,ಇದು ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪ್ರಚಾರದ ಅಸ್ತ್ರವಾಗಿ ಬಳಸಿತ್ತು. ಎರಡನೇ ಹಂತದಲ್ಲಿ ಅಂದರೆ ಮುಂದಿನ ಎರಡೂವರೆ ವರ್ಷಕ್ಕೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿಪಿಐಯ ಮುಂದಿನ ನಡೆ ಏನು ಎಂಬುದು ಪುರವಾಸಿಗಳಲ್ಲಿರುವ ಸದ್ಯದ ಕುತೂಹಲ.
ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಾರೆಯೇ ಅಥವಾ ಪ್ರತ್ಯೇಕವಾಗಿಯೇ ಉಳಿಯುತ್ತಾರೋ ಎಂಬುದನ್ನು ಕಾದು ನೋಡಬೇಕಷ್ಠೇ.!