ಬೆಳ್ತಂಗಡಿ: ಬಡಗಕಾರಂದೂರು ಗ್ರಾಮದ ಅಳದಂಗಡಿ ಸುಂಕದಕಟ್ಟೆಯಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ಕಳವುಗೈದಿರುವ ಬಗ್ಗೆ ಸೆ. ೨೩ರಂದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಂಕದಕಟ್ಟೆಯ ನಿವಾಸಿ ಫೌಜಿಯಾ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಫೌಜಿಯಾ ಅವರು ರಾತ್ರಿ ಹತ್ತಿರದ ಸಹೋದರನ ಮನೆಗೆ ಹೋಗಿದ್ದು, ಬೆಳಿಗ್ಗೆ ಮನೆಗೆ ಬಂದು ಗಮನಿಸಿದಾಗ ಬಾಗಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ. ಕಳ್ಳರು ಬೀಗ ಮುರಿದು ಮನೆಯ ಬೆಡ್ ರೂಂನಲ್ಲಿದ್ದ ಗೋದ್ರೇಜ್ ಕಪಾಟನ್ನು ತೆರದು ಅದರಲ್ಲಿದ್ದ ಸುಮಾರು ಎರಡೂವರೆ ಪವನ್ ತೂಕದ ೨ ಚಿನ್ನದ ಸರ, ೧ ಪವನ್ ತೂಕದ ೨ ಜತೆ ಕಿವಿಯೋಲೆಗಳು, ಸುಮಾರು ಎರಡೂವರೆ ಪವನ್ ತೂಕದ ೨ ಬ್ರಾಸ್ಲೈಟ್ ಸೇರಿದಂತೆ ರೂ. ೨೫ ಸಾವಿರ ನಗದನು ದೋಚಿದ್ದಾರೆ.
ನಗ-ನಗದು ಸೇರಿದಂತೆ ಕಳವಾದ ಒಟ್ಟು ಮೌಲ್ಯ ರೂ. ೨,೯೭,೦೦೦ ಲಕ್ಷ ಎಂದು ಅಂದಾಜಿಸಲಾಗಿದ್ದು, ವೇಣೂರು ಪೊಲೀಸ್ ಉಪ ನಿರೀಕ್ಷಕಿ ಸೌಮ್ಯ ಜೆ. ಹಾಗೂ ಸಿಬ್ಬಂದಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.