ಬೆಂಗಳೂರು, ಸೆ.22: ಎನ್.ಜಿ.ಇ.ಎಫ್ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘಿಸಿ, ಭೂ ಮಾಫೀಯಾ ಜೊತೆ ಕೈಜೋಡಿಸಿ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವ ಎನ್.ಜಿ.ಇ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಗುಂಜನ್ ಕೃಷ್ಣ ಅವರ ವಿರುದ್ಧ ನಗರದ ಖನಿಜ ಭವನದ ಮುಂದೆ 439 ಉದ್ಯೋಗಿಗಳು ಭಾರೀ ಪ್ರತಿಭಟನೆ ನಡೆಸಿದರು.
ಬಹುತೇಕ ಮಂದಿ ಹಿರಿಯ ನಾಗರಿಕರಾಗಿದ್ದು, ತಾವು ದುಡಿದ ಸಂಸ್ಥೆಯಿಂದ ತಮಗೆ ದೊರೆಯಬೇಕಾಗಿದ್ದ ನ್ಯಾಯಯುತ ಪರಿಹಾರಕ್ಕಾಗಿ ಪ್ರತಿನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲ ಎಂದು ಆರೋಪಿಸಿದರು.
ಉಚ್ಛ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 439 ನೌಕರರಿಗೆ ನ್ಯಾಯುತವಾಗಿ ಬರಬೇಕಾಗಿರುವ ಬಾಕಿ ಹಣ ನೀಡದೇ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಅವರು ಭೂ ಮಾಫೀಯ ಜೊತೆ ಕೈಜೋಡಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡು ಕಾರ್ಮಿಕರ ಹಣದ ದುರುಪಯೋಗ ಮತ್ತು ದುಂದುವೆಚ್ಚ ಮಾಡುತಿದ್ದಾರೆ. ಅತ್ಯಂತ ಭ್ರಷ್ಟ ಅಧ್ಯಕ್ಷ ಮತ್ತು ಅಧಿಕಾರಿಯಾಗಿರುವ ಇವರು ನೌಕರರ ವಿಚಾರದಲ್ಲಿ ಅಮಾನವೀಯಗಾಗಿ ವರ್ತಿಸುತ್ತಿದ್ದಾರೆ ಎಂದು ಅವರ ಧೋರಣೆ ಖಂಡಿಸಿ ಖನಿಜ ಭವನದ ಎನ್.ಜಿ.ಇ.ಎಫ್, ಆಡಳಿತ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.