ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೆತುವೆ ವಿಸ್ತರಣೆಗೆ 5.34 ಕೋಟಿ ರೂ. ಮಂಜೂರಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನ, ನಮ್ಮ ಒತ್ತಾಯಕ್ಕೆ ಬೆಲೆ ಸಿಕ್ಕಂತಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರುನಗರದಿಂದ ಉಪ್ಪಿನಂಗಡಿ ಸಂಪರ್ಕಿಸುವ ವಿವೇಕಾನಂದ ಕಾಲೇಜು ರಸ್ತೆ ಸಂಪರ್ಕ ರಸ್ತೆಯಾಗಿ ಸಹಕಾರಿಯಾಗಲಿದೆ. ಆದ್ದರಿಂದ ರೈಲ್ವೇ ಮೇಲ್ಸೆತುವೆಯನ್ನು ವಿಸ್ತರಿಸಿದರೆ, ಪುತ್ತೂರಿನ ಇನ್ನೊಂದು ಬೈಪಾಸ್ ಆಗಿಯೂ ಇದು ಸಹಕಾರಿಯಾಗಲಿದೆ ಎಂದರು.
ರೈಲ್ವೇ ಇಲಾಖೆಯ ಸೌತ್ ವೆಸ್ಟರ್ನ್ ವಿಭಾಗ ಅನುದಾನ ಮಂಜೂರುಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ 50-50 ಯೋಜನೆಯಡಿ ಕಾಮಗಾರಿ ನಡೆಸುವ ಪ್ರಸ್ತಾಪ ಇತ್ತು. ಆದರೆ ಇದೀಗ, ರೈಲ್ವೇ ಇಲಾಖೆಯೇ ಪೂರ್ಣ ಕಾಮಗಾರಿಯನ್ನು ನಡೆಸಲಿದೆ. ಇದಕ್ಕಾಗಿ ಎಸ್ಟಿಮೇಟ್ ಸಿದ್ಧವಾಗಿದ್ದು, 5.35 ಕೋಟಿ ರೂ. ಬಿಡುಗಡೆ ಮಾಡಿದೆ. ಆದ್ದರಿಂದ ಅನುದಾನ ಬಿಡುಗಡೆ ಮಾಡಿದ ಕೇಂದ್ರದ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ನೆಹರುನಗರದ ವಿವೇಕಾನಂದ ಕಾಲೇಜಿನಲ್ಲಿ ಸುಮಾರು 12 ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುವುದರಿಂದ, ದಿನನಿತ್ಯ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿತ್ತು. ಮುಂದೆ ಈ ಸಮಸ್ಯೆ ಇಲ್ಲವಾಗಲಿದೆ ಎಂದರು.
ಅಂಡರ್ಪಾಸ್, ಓವರ್ ಬ್ರಿಡ್ಜ್:
ಎಪಿಎಂಸಿ ಸುಗಮ ಸಂಪರ್ಕಕ್ಕೆ ಅಡ್ಡಿಯಾಗಿದ್ದ ರೈಲ್ವೇ ಹಳಿಯನ್ನು ತಪ್ಪಿಸಿ ಅಂಡರ್ ಪಾಸ್ ನಿರ್ಮಿಸಲಾಗಿದೆ. ಇದೀಗ ನೆಹರೂನಗರದ ವಿವೇಕಾನಂದ ಕಾಲೇಜಿನ ರಸ್ತೆಯ ರೈಲ್ವೇ ಹಳಿಗೆ ಓವರ್ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ. ಎಪಿಎಂಸಿ ರಸ್ತೆ ಕೆಲವೇ ದಿನಗಳಲ್ಲಿ ಸಂಚಾರಕ್ಕೆ ತೆರೆದುಕೊಳ್ಳಲಿದ್ದು, ವಿವೇಕಾನಂದ ಕಾಲೇಜಿನ ರಸ್ತೆ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಇದರ ಜೊತೆಗೆ ಆದರ್ಶ ರೈಲ್ವೇ ಯೋಜನೆಯನ್ನು ಪುತ್ತೂರಿಗೆ ತರುವ ಕೆಲಸ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ನೆನಪಿಸಿಕೊಂಡರು.