ಕೊಲ್ಲಿ: ಶ್ರೀ ದುರ್ಗಾ ದೇವಸ್ಥಾನದಲ್ಲಿ ಜೀಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವರ ಸನ್ನಿಧಾನದಿಂದ ಶಿಲಾಮಯ ಧ್ವಜಸ್ತಂಭವನ್ನು ಭವ್ಯವಾದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದು ಬಳಿಕ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮೆರವಣಿಗೆಗೆ ಚಾಲನೆ ನೀಡಿದರು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್,ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಬಿ.ಕೆ.ಲೋಕೇಶ್ ರಾವ್, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ ದಿಡುಪೆ, ಸಲಹೆಗಾರ ಧನಂಜಯ ರಾವ್ ಬಿ.ಕೆ.ಮಹಿಳಾ ಸಮಿತಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ, ಅಶೋಕ್ ಕುಮಾರ್, ವಿನಯಚಂದ್ರ,ಎಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ ಭಕ್ತರು ಉಪಸ್ಥಿತರಿದ್ದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಿಂದ ಕಿಲ್ಲೂರು ಪೇಟೆಯವರೆಗೆ ವಾಹನದ ಮೂಲಕ ಚೆಂಡೆ, ನಾಸಿಕ್ ಬ್ಯಾಂಡ್, ಮೆರವಣಿಗೆಯೊಂದಿಗೆ ಸಾಗಿತು. ಕಿಲ್ಲೂರು ಪೇಟೆಯಿಂದ ಕಾಲ್ನಡಿಗೆಯ ಮೆರವಣಿಗೆ ಮೂಲಕ ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಾನಕ್ಕೆ ಸಾಗಿತು.ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಸಮಿತಿಯ ಗೌರವ ಸಲಹೆಗಾರ ಬಿಕೆ ಧನಂಜಯ ರಾವ್ ಮಾತನಾಡಿ”ಊರ ದೇವಸ್ಥಾನ ಅಭಿವೃದ್ದಿಗೆ ಊರಿನವರು ಅಭೂತ ಪೂರ್ವ ಸಹಕಾರ ನೀಡುತ್ತಿದ್ದಾರೆ.ಅಂದಾಜು 4ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರ ಗೊಳ್ಳುತ್ತಿರುವ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ನಡೆಸುವ ಯೋಜನೆ ರೂಪಿಸಲಾಗಿದೆ.ಈಗಾಗಲೇ ಶಾಸಕರ ಮುತುವರ್ಜಿಯಲ್ಲಿ ಸರಕಾರದಿಂದ 50ಲಕ್ಷ ರೂ.ಬಿಡುಗಡೆ ಗೊಂಡಿದೆ.ಎಂದರು.
ಶಿಲಾಮಯ
ಸಂಪೂರ್ಣ ಶಿಲಾಮಯವಾಗಿ ನಿರ್ಮಾಣ ಗೊಳ್ಳಿತ್ತಿರುವ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಅರ್ಧಕ್ಕೂ ಹೆಚ್ಚು ಪೂರ್ಣಗೊಂಡಿದೆ. ಬೈಲುವಾರು ಸಮಿತಿ ಸೇರಿದಂತೆ ಮಾಗಣೆ ಗ್ರಾಮಗಳ ಗ್ರಾಮಸ್ಥರು ದೇಗುಲ ಅಭಿವೃದ್ಧಿಗೆ ಅತಿ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಶಾಸಕರು, ಮಹಿಳಾ ಸಮಿತಿ ಸೇರಿದಂತೆ ದೇವಸ್ಥಾನ ಅಭಿವೃದ್ದಿಗೆ ಸಹಕಾರ ನೀಡುತ್ತಿರುವ ನಾಗರಿಕರಿಗೆ ಅಭಿನಂದನೆ ಸಲ್ಲಿಸಲಾಯಿತು.