ಮಂಗಳೂರು: ಉಳ್ಳಾಲ ಕಡಲ ತೀರದಲ್ಲಿ ಕೋಸ್ಟ್ ಗಾರ್ಡ್ ಟೀಂನಿಂದ ಅಣಕು ಪ್ರದರ್ಶನ ನಡೆಯಿತು. ಎಂವಿ ಪ್ರಿನ್ಸಸ್ ಮಿರಾಲ್ ಎಂಬ ಹಡಗು ಮುಳುಗಡೆಯಾದ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ದ.ಕ.ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಉಳ್ಳಾಲ ಕಡಲ ತೀರದಲ್ಲಿ ಆದಿತ್ಯವಾರ ಅಣಕು ಪ್ರದರ್ಶನವನ್ನು ನಡೆಸಲಾಯಿತು.
ಈ ವೇಳೆ ಸಮುದ್ರದಲ್ಲಿ ತೈಲ ಸೋರಿಕೆಯಾದ ಸಂದರ್ಭ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮ ಹಾಗೂ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪ್ರದರ್ಶನ ನಡೆಸಲಾಯಿತು. ಅಗ್ನಿ ಶಾಮಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆ, ಗೃಹರಕ್ಷಕ ಪಡೆ, ಮೀನುಗಾರರು, ವಿವಿಧ ಕೈಗಾರಿಕೆಗಳ ಸುಮಾರು 2೦೦ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೋಸ್ಟ್ ಗಾರ್ಡ್ ಅಧಿಕಾರಿಗಳು ಸಹಕಾರ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಫ್ಯಾಕ್ಟರಿಸ್ ಮತ್ತು ಬಾಯ್ಲರ್ಸ್ ಇಲಾಖೆಯ ಉಪ ನಿರ್ದೇಶಕರು, ಲೋಕೋಪಯೋಗಿ, ಉಳ್ಳಾಲ ನಗರಸಭೆ, ಮಿನುಗಾರಿಕೆ ಇಲಾಖೆ, ಉಳ್ಳಾಲ ತಹಶೀಲ್ದಾರ್, ಮೆಸ್ಕಾಂ,ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ, ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ, ಹೋಮ್ಗಾರ್ಡ್ ಕಮಾಂಡೆಂಟ್ ಸಿಆರ್ಜೆಡ್, ಆರೋಗ್ಯ, ಪೊಲೀಸ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ವಿಜಯ ಕುಮಾರ್ ಉಪಸ್ಥಿತರಿದ್ದರು.