ಸುಳ್ಯ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಇನ್ನು ಮುಹೂರ್ತ ನಿಗದಿಯಾಗಿಲ್ಲ. ಅದಾಗಲೇ ಯಾವ ಕ್ಷೇತ್ರಕ್ಕೆ ಯಾರು ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ಕ್ಷೇತ್ರಗಳಿದ್ದು, ಇದರಲ್ಲಿ 7 ಮಂದಿ ಬಿಜೆಪಿ ಶಾಸಕರಿದ್ದಾರೆ. ಆದರೆ ಈ ಏಳರ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಹಾಲಿ ಶಾಸಕರಿಗೆ ಮತ್ತೆ ಟಿಕೇಟ್ ನೀಡುವ ಸಾಧ್ಯತೆಗಳಿದ್ದು, ಸೋಲಿಲ್ಲದ ಸರದಾರ ಸುಳ್ಯ ಕ್ಷೇತ್ರದ ಶಾಸಕ ಅಂಗಾರರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ರಾಜಕೀಯ ವಲಯದಲ್ಲಿ ಗುಸುಗುಸು ಸುದ್ದಿ ಹರಿದಾಡ್ತಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯಾರ್ಥಿ ಯಾರೆಂಬುದು ಇನ್ನು ನಿಗೂಡವಾಗಿ ಉಳಿದಿದೆ. ಸುಳ್ಯದಲ್ಲಿ ಎಸ್ ಅಂಗಾರ ರವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಈ ಬಾರಿ ಹೊಸಬರಿಗೆ ಅವಕಾಶ ಕೊಡಬೇಕೆಂಬ ಕೂಗು ಕೇಳಿಬರುತ್ತಿದೆ. ಸಾರ್ವಜನಿಕ ವಲಯಗಳಲ್ಲಿ ಅಭ್ಯರ್ಥಿ ಬದಲಾವಣೆಯ ಪಿಸುಗುಸು ಮಾತು ಕೇಳಿ ಬರುತ್ತಿದ್ದು ಬಿಜೆಪಿಯ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಅನ್ನೋದು ಇನ್ನು ಗೌಪ್ಯವಾಗಿದೆ.
ಪಕ್ಷ ಸೂಚಿಸಿದರೆ ನಾನೇ ಈ ಬಾರಿ ಸ್ಪರ್ದಿಸುವೆ ಎಂದು ಈಗಾಗಲೇ ಶಾಸಕ ಹಾಗೂ ಸಚಿವರಾಗಿರುವ ಎಸ್. ಅಂಗಾರ ತಿಳಿಸಿದ್ದಾರೆ. ಈ ಬಾರಿ ಮತ್ತೆ ಅವರೆ ಸ್ಪರ್ಧಿಸುವುದಾದರೆ ಪಕ್ಷ ಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ಇಲ್ಲವೆ? ಎಂಬ ಪ್ರಶ್ನೆಗಳು ಸುಳ್ಯದ ಕೇಸರಿ ಪಾಳಯಕ್ಕೆ ತಟ್ಟಲಿದೆ.
ಪಕ್ಷದ ಸಿದ್ದಾಂತವನ್ನು ಪಾಲಿಸುವವರು ಮತ್ತೆ ಮತ್ತೆ ಅವಕಾಶ ಕೇಳಲಾರರು. ಒಂದು ವೇಳೆ ಸುಳ್ಯದ ಬಿಜೆಪಿ ಪಕ್ಷದ ಕೆಲವು ಪ್ರಮುಖರು ಎಸ್ ಅಂಗಾರರನ್ನೇ ಸೂಚಿಸಿದರೆ ಬೇರೆ ಪಕ್ಷಗಳಿಗೆ ಸ್ವತಂತ್ರವಾಗಿ ಗೆದ್ದು ಬೀಗಲು ಅವಕಾಶ ಮಾಡಿಕೊಟ್ಟಂತೆ ಎಂಬ ಮಾತುಗಳು ಕೇಳಿಸುತ್ತಿವೆ.
ಹಾಗಾಗಿ ಈ ಬಾರಿ ಸುಳ್ಯದಲ್ಲಿ ಎಸ್ ಅಂಗಾರರ ಬದಲಿಗೆ ಹೊಸ ಮುಖವೊಂದಕ್ಕೆ ಟಿಕೆಟ್ ನೀಡುವುದಕ್ಕೆ ಎಲ್ಲ ರೀತಿಯಲ್ಲೂ ಮಾತುಕತೆಗಳು ನಡೆದಿವೆ ಮೂಲಗಳಿಂದ ತಿಳಿದುಬಂದಿದೆ. ಸುಳ್ಯದಲ್ಲಿ ಈ ಬಾರಿ ಆರ್ ಎಸ್ ಎಸ್ ಸಿದ್ದಾಂತದ ಪ್ರಕಾರವೇ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಈ ಬಾರಿ ದಿನೇಶ್ ಅಮ್ಟೂರು ರವರ ಮೇಲೆ ಹೈಕಮಾಂಡ್ ಹೆಚ್ಚಿನ ಒಲವು ವ್ಯಕ್ತ ಪಡಿಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ದಿನೇಶ್ ಅಮ್ಟೂರುರವರ ಹೆಸರಿನ ಪಟ್ಟಿಯೊಂದು ತಲುಪಿದ್ದು ಈ ಬಾರಿ ಅವರಿಗೆ ಟಿಕೇಟ್ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.