ಬೆಳ್ತಂಗಡಿ : ಭಜನೆಯಿಂದ ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಾಮಾಜಿಕ ಪರಿವರ್ತನೆಯಾಗುತ್ತದೆ. ಉತ್ತಮ ನಾಯಕತ್ವದೊಂದಿಗೆ ದುಶ್ಚಟ ಮುಕ್ತವಾದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಸದಾ ಸತ್ಯವನ್ನೆ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆದಾಗ ಋಣಾತ್ಮಕ ಭಾವನೆಗಳು ದೂರವಾಗಿ, ಧನಾತ್ಮಕ ಚಿಂತನೆಗಳು ಮೂಡಿ ಬರುತ್ತವೆ. ಭಜನೆಯ ಮೂಲಕ ಭಕ್ತಿಯ ಪರಾಕಾಷ್ಟೆಯೊಂದಿಗೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಮಕ್ಕಳಿಗೆ ಭಜನಾ ಸಂಸ್ಕøತಿಯ ತರಬೇತಿಯನ್ನು ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಶುಭಾಶಂಸನೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಮಾತನಾಡಿ, ಹಿಂದೂ ಧರ್ಮ ವಿಶಾಲ ಮನೋಧರ್ಮ ಹೊಂದಿದ್ದು, ಧರ್ಮವು ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ಯುವ ಜನತೆ ಧರ್ಮದ ಮರ್ಮವನ್ನು ಅರಿತು ಆಚರಣೆ ಮಾಡಬೇಕು. ಸನಾತನ ಸಂಸ್ಕøತಿಯ ರಾಯಬಾರಿಗಳಾಗಬೇಕು ಎಂದು ಅವರು ಸಲಹೆ ನೀಡಿದರು. ಸಂದರ್ಭಕ್ಕೆ ಸರಿಯಾಗಿ ಭಜನೆ ಹಾಡಬೇಕು. ರಾಗ, ತಾಳ, ಲಯ ಬದ್ಧವಾದ ಭಜನೆಗಳನ್ನು ಶ್ರದ್ಧಾ-ಭಕ್ತಿಯಿಂದ ಹಾಡಿ, ಕೇಳಿ ಅದರ ಸೊಗಡನ್ನು ಆಸ್ವಾದಿಸಿ ಅನುಭವಿಸಬೇಕು ಎಂದು ಅವರು ಸಲಹೆ ನೀಡಿದರು.
ಭಜನಾ ತರಬೇತಿ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.