ಮಂಗಳೂರು: ಎಳನೀರು ಸೇವಿಸಿ ಇದುವರೆಗೆ 137 ಮಂದಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಮಂಗಳೂರು ಅಡ್ಯಾರ್ನಲ್ಲಿರುವ ಬೊಂಡ ಫ್ಯಾಕ್ಟರಿ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಜೊತೆಗೆ ಎಳನೀರು ಮತ್ತು ಇತರ ಆಹಾರೋತ್ಪನ್ನಗಳನ್ನು ಮಾರಾಟ ಮಾಡದಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಸೋಮವಾರ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಸೇವಿಸಿ 137 ಮಂದಿ ಅಸ್ವಸ್ಥರಾಗಿದ್ದರು. ಹೊರ ರೋಗಿಗಳಾಗಿ 84 ಮಂದಿ ಹಾಗೂ ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗೆ 23 ಮಂದಿ ಮಾತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅನೇಕರು ಒಳರೋಗಿಗಳಾಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದ್ದು ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತಿ ಹೆಚ್ಚಿನ ಬಿಸಿಲಿನ ತಾಪದಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚು ಇದೆ. ಹಾಗಾಗಿ ಅತಿ ಹೆಚ್ಚು ನೀರು ಕುಡಿಯಬೇಕು. ಜನರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕೆಂದು ಅಧಿಕಾರಿಗಳು ಜನರಿಗೆ ,ಮಾಧ್ಯಮದ ಮೂಲಕ ಮಾಹಿತಿಯನ್ನು ನೀಡಿದರು.
ಬೊಂಡಾ ನೀರಿನ ಸ್ಪಾಂಲ್ಸ್ ಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಅದನ್ನು ಬೆಂಗಳೂರಿನ ಪ್ರಯೋಗಶಾಲೆಗೆ ಕಳುಹಿಸಿಕೊಟ್ಟಿದ್ದು, ಒಂದೆರಡು ದಿನಗಳಲ್ಲಿ ಅದರ ವರದಿ ಬರಲಿದ್ದು ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.