ಮಂಗಳೂರು: ಕಾರ್ಕಳದಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ನಾನು ಮೂರು ತಿಂಗಳಿನಿಂದ ಆ ಕ್ಷೇತ್ರದಲ್ಲಿ ದುಡೀತಾ ಇದೀನಿ, ಈಗಾಗಲೇ ಮೊದಲ ಹಂತವಾಗಿ ಅಲ್ಲಿ 50 ಕಾರ್ಯಕರ್ತರು ಬಂದಿದ್ದಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನನಗೆ ರಾಜಕೀಯ ಗೊತ್ತಿಲ್ಲ. ಹಿಂದುತ್ವದ ವಿಚಾರಧಾರೆ ಇರುವ ವ್ಯಕ್ತಿ ಪ್ರಾಮಾಣಿಕತೆ ಮತ್ತು ನೇರ ಮಾತು ನನಗೆ ಮುಳ್ಳಾಯಿತು. ನಾನು ಕೂಡಾ ಬಕೆಟ್ ಹಿಡಿದಿದ್ದರೆ, ಬಿಜೆಪಿಯವರ ಡೋಂಗಿ ಹಿಂದುತ್ವ, ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದರೆ ಎಲ್ಲೊ ಇರುತ್ತಿದ್ದೆ, ಬಿಜೆಪಿ ನನಗೆ ಟಿಕೆಟ್ ಕೊಟ್ಟರೂ ಆ ಪಕ್ಷಕ್ಕೆ ಹೋಗಲ್ಲ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನ್ನ ಮೇಲೆ ಈ ತನಕ 109 ಕೇಸ್ ಹಾಕಲಾಗಿದೆ. ಇದರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ನನ್ನ ಮೇಲೆ ಹೆಚ್ಚು ಕೇಸ್ ದಾಖಲಾಗಿದೆ. ಗಡಿಪಾರು ನಿರ್ಬಂಧನೆ , ಹಿಂದುತ್ವದ ವಿಚಾರದಲ್ಲಿ ನಮ್ಮವರಿಂದಲೇ ಹೆಚ್ಚು ತೊಂದರೆ ಅನುಭವಿಸಿದ್ದೇನೆ ಎಂದು ಶ್ರೀರಾಮ ಸೇನಾ ಕರ್ನಾಟಕ ಇದರ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನನಗೆ ಯಾರ ಒತ್ತಡವೂ ಇಲ್ಲ. ನನಗೆ ತುಂಬಾ ಜನರು ಬೆಂಬಲ ನೀಡುತ್ತಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾಗುವುದು ಖಚಿತ, ನನ್ನದು ಅಸಲಿ ಹಿಂದುತ್ವ ಮತ್ತು ಭ್ರಷ್ಟಚಾರದ ವಿರುದ್ಧ ಸ್ಪರ್ಧೆಯಾಗಿದೆ. ಕಾರ್ಕಳದಲ್ಲಿ ಜನರನ್ನು ಬೆದರಿಸುವ ವಾತಾವರಣ ಇದೆ ಎಂದು ಹೇಳಿದರು.
ನನ್ನಲ್ಲಿ ಏನು ಇಲ್ಲ. ನನ್ನತ್ರ ದುಡ್ಡಿಲ್ಲ, ಬಾಡಿಗೆ ಮನೆಯಲ್ಲಿ ನಾನು ಇರುವವನು ಆದರೆ ನನಗೆ ಭಯ ಇಲ್ಲ. ಚುನಾವಣೆಯಲ್ಲಿ ಸ್ಪರ್ಧೆಗೆ ತೊಂದರೆಯಾಗದು ಎಂದರು.
ನನಗೆ ಬಿಜೆಪಿಯಲ್ಲಿ ಇರುವವರೇ ಸಹಕಾರ ಕೊಡ್ತೀವಿ ಹೇಳಿದ್ದಾರೆ. ಅವರೆಲ್ಲಾ ನನಗೆ ತನು-ಮನ-ಧನದ ಸಹಕಾರ ಕೊಡ್ತೀವಿ ಅಂದಿದಾರೆ ಎಂದು ಮುತಾಲಿಕ್ ಹೇಳಿದ್ದಾರೆ.