ಬಂಟ್ವಾಳ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಾಮೂಹಿಕವಿವಾಹದ ಮೂಲಕ ಹೊಸಚಾರಿತ್ರ್ಯವನ್ನು ಬರೆದಿದೆ ಎಂದು ಮಾಣಿಲ ಶ್ರೀ ಧಾಮದ ಮೋಹನ ದಾಸ ಸ್ವಾಮೀಜಿ ಹೇಳಿದರು.
ಭಾನುವಾರ ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 38ನೇ ಸಂಭ್ರಮಾಚರಣೆಯ ಪ್ರಯುಕ್ತ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ,ನೂತನ ವಧು-ವರರಿಗೆ ಅವರು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನಗೈದರು.
ಇಲ್ಲಿನ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ಎಲ್ಲಾ ನವದಂಪತಿಗಳು ಭಾಗ್ಯವಂತರು ಎಂದ ಶ್ರೀಗಳು, ಇಲ್ಲಿ ಆಡಂಬರ ಇಲ್ಲದೆ ವೈಭವಯುತವಾಗಿ ನಡೆದಿದ್ದು,ಆದರ್ಶ ಜೀವನ ನಡೆಸುವ ಮೂಲಕ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸೇವಾ ಕಾರ್ಯಕ್ಕೆ ಸಾರ್ಥಕತೆ ಯನ್ನು ತಂದುಕೊಡಬೇಕು ಎಂದರು.
ಸಾಮೂಹಿಕ ವಿವಾಹದ ನೇತೃತ್ವ ವಹಿಸಿದ ತುಂಗಪ್ಪ ಬಂಗೇರರನ್ನು ಅಭಿನಂದಿಸಿದ ಅವರು, ರಾಜಕೀಯದಲ್ಲಿ ತೃಪ್ತಿ ಎಂಬುದಿಲ್ಲ, ಆದರೆ ಇಂತಹಾಕಾರ್ಯದಲ್ಲಿ ಆತ್ಮಸಂತೃಪ್ತಿ ಹೆಚ್ಚು ಎಂದ ಅವರು, ಇಂತಹಾ ಕಾರ್ಯನಿರಂತರವಾಗಿ ಮುನ್ನಡೆಯಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ, ಸಾಮೂಹಿಕ ವಿವಾಹ ನಡೆಸುವಂತದ್ದು ಪುಣ್ಯದ ಕಾರ್ಯವಾಗಿದೆ ಎಂದು ಅಭಿನಂದಿಸಿದರಲ್ಲದೆ, ಈ ಬಂಗ್ಲೆ ಮೈದಾನವನ್ನು ಒಳಾಂಗಣ ಕ್ರೀಡಾಂಗಣವನ್ನಾಗಿ ಪರಿವರ್ತಿಸಲು ಸರ್ವರೀತಿಯಲ್ಲಿ ಪ್ರಯತ್ನಿಸಲಾಗುವುದು, 6 ಕೋ.ರೂ. ವೆಚ್ಚದಲ್ಲಿ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ ಅತೀ ಶೀಘ್ರ ಮೇಲ್ದರ್ಜೆಗೇರಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಪ್ರಕ್ರಿಯೆಯು ಮುಂದುವರಿದಿದೆ.ಮುಖ್ಯಮಂತ್ರಿಯವರು ಬಜೆಟ್ ನಲ್ಲಿ ಪ್ರಸ್ತಾಪಿಸಿರುವ 29 ಕೋ.ರೂ.ವಿನ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆ ದ.ಕ.ಜಿಲ್ಲೆಯ ಬಂಟ್ವಾಳ ಕ್ಷೇತ್ರದ ಪುಂಜಾಲಕಟ್ಟೆಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಅತೀ ಶೀಘ್ರದಲ್ಲಿ ಇದಕ್ಕು ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.
ಪೆದುಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಡಾಜೆಗುತ್ತು ರವಿಶಂಕರ ಶೆಟ್ಟಿ ಅವರು ವಧುವಿಗೆ ಮಂಗಲಸೂತ್ರ ವಿತರಿಸಿ ಶುಭಹಾರೈಸಿದರು. ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ನೂತನ ವಧುವರರಿಗೆ ಶುಭಹಾರೈಸಿದರು
ಮುಂಬೈ ಉದ್ಯಮಿ ಸುಂದರರಾಜ್ ಹೆಗ್ಡೆ ದಂಪತಿ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಮಾಜಿ ಸಚಿವ ನಾಗರಾಜ ಶೆಟ್ಟಿ, ಉದ್ಯಮಿ ಹರೀಂದ್ರ ಪೈ, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಪ್ಪಾನಂದ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ತಾ.ಪಂ.ಮಾಜಿ ಸದಸ್ಯರಾದ ಮಾಧವ ಮಾವೆ,ಮಾಜಿ ಜಿಪಂ ಸದಸ್ಯೆ ಮಂಜುಳಾ ಮಾವೆ, ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ,ಪಿಲಾತಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಮಾಲಾಡಿ ಗ್ರಾಪಂ ಸದಸ್ಯ ಪುನೀತ್ ಕುಮಾರ್ , ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಉದ್ಯಮಿ ಓಂಪ್ರಸಾದ್,ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ ,ಐ. ಸುಕೇತ್ ಅತಿಥಿಗಳಾಗಿದ್ದರು.
ಸ್ವಸ್ತಿ ಸಿರಿ”ರಾಜ್ಯ ಪ್ರಶಸ್ತಿ
ವಿವಿಧ ಕ್ಷೇತ್ರದ ಸಾಧಕರಾದ ಲ| ಸುಧಾಕರ ಆಚಾರ್ಯ(ಉದ್ಯಮ),ಅರ್ಜುನ್ ಭಂಡಾರ್ಕರ್(ಸಮಾಜ ಸೇವೆ), ರಾಜೇಂದ್ರ ಕಂರ್ಬಡ್ಕ(ಉದ್ಯಮ) “ಸ್ವಸ್ತಿ ಸಿರಿ”ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮತ್ತು ಎಂ.ಡಿ.ವೆಂಕಪ್ಪ(ಜನಪದ), ನಾರಾಯಣ ನಾವುಡ (ಸಮಾಜಸೇವೆ),ರಮೇಶ್.ಕೆ. ಪುಣಚ(ಪತ್ರಿಕೋದ್ಯಮ),ಆಪ್ತಿ ಬಿ.ಪೂಜಾರಿ(ಕಲೆ),ಯಶವಂತ ಸ್ನೇಹಗಿರಿ(ಕಲೆ)”ಸ್ವಸ್ತಿಕ್ ಸಂಭ್ರಮ” ಪುರಸ್ಕಾರ ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ಅತ್ಯುತ್ತಮ ಸಂಘಟನೆ)ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿಧಿಷಾ ಮತ್ತು ಸ್ವಾತಿ ವಾಮದಪದವು ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ವಧು-ವರರ ಮೆರವಣಿಗೆ:
ಇದಕ್ಕು ಮುನ್ನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಿಂದ ವಧು-ವರರ ವೈಭವಪೂರ್ಣವಾದ ದಿಬ್ಬಣದ ಮೆರವಣಿಗೆಯು ಸಾಗಿ ಬಂದು ಮದುವೆ ಮಂಟಪದಲ್ಲಿ ಸಂಪನ್ನಗೊಂಡಿತು. ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ 11 ಗಂಟೆಯ ಶುಭ ಮುಹೂರ್ತದಲ್ಲಿ 20 ಜೋಡಿ ವಧು-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆಗೈದರು.
ಕ್ಲಬ್ನ ಅಧ್ಯಕ್ಷರಾದ ಪ್ರಶಾಂತ್ ಪುಂಜಾಲಕಟ್ಟೆ,ಕಾರ್ಯದರ್ಶಿ ಜಯರಾಜ್ ಅತ್ತಾಜೆ,ಗೌರವಾಧ್ಯಕ್ಷ ಅಬ್ದುಲ್ಲಾ ಪಿ.,ಮೊದಲಾದವರು ವೇದಿಕೆಯಲ್ಲಿದ್ದರು.
ಕ್ಲಬ್ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಸ್ತಾವನೆಗೈದರು.
ಕ್ಲಬ್ ನ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು.ಸಂಚಾಲಕ ರಾಜೇಶ್ ಪಿ. ಬಂಗೇರ ವಂದಿಸಿದರು.ನಿವೃತ್ತ ಶಿಕ್ಷಕ ರಾಮಚಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಬಂಗ್ಲೆ ಮೈದಾನದಒಳಾಂಗಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆಯಾಗಿ ನೀಡಲಾದ 28 ಫ್ಯಾನ್ ನ್ನು ಉದ್ಘಾಟಿಸಲಾಯಿತು.
ಸಾಮೂಹಿಕ ವಿವಾಹದ ಹಿನ್ನಲೆಯಲ್ಲಿ ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂತ್ರ ದೇವತೆ ಕ್ರಿಯೇಶನ್ಸ್ ಅವರ ನಿರ್ಮಾಣದ “ಚಂದ್ರನ್ “ಕಿರು ಚಿತ್ರ ಬಿಡುಗಡೆಗೊಂಡಿತು. ಕುದ್ರೋಳಿ ಗಣೇಶ್ ಅವರಿಂದ ಮಸ್ತ್ ಮ್ಯಾಜಿಕ್ ಹಾಗೂ ದಿವಂಗತ ಕೆ.ಎನ್.ಟೇಲರ್ ವಿರಚಿತ ಕಂಡನಿ ಬುಡೆದಿ ತುಳುನಾಟಕ ಪ್ರದರ್ಶನಗೊಂಡಿತು.