ವಿಟ್ಲ: ಶ್ರೀ ಕೊರಗಜ್ಜ ದೈವಕ್ಕೆ ಅಪಮಾನವೆಸಗಿದ ಆರೋಪಿಗಳನ್ನು ಇನ್ನೂ ಪೊಲೀಸರು ಬಂಧಿಸದ ಹಿನ್ನೆಲೆಯಲ್ಲಿ ಜ.11ರಂದು ಮಂಗಳವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಸ್ವಯಂಪ್ರೇರಿತ ವಿಟ್ಲ ಬಂದ್ ನಡೆಸಲು ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.
ಮಂಜೇಶ್ವರ ತಾಲೂಕಿನ ಉಪ್ಪಳದ ಮುಸ್ಲಿಂ ಮದುಮಗ ತನ್ನ 50ಕ್ಕೂ ಹೆಚ್ಚು ಮಂದಿ ಸ್ನೇಹಿತರೊಂದಿಗೆ ಸಾಲೆತ್ತೂರು ಕೊಳ್ನಾಡಿನ ವಧುವಿನ ಮನೆಗೆ ತಡರಾತ್ರಿ ಆಗಮಿಸಿದ ವೇಳೆ ತುಳುನಾಡಿನ ಆರಾಧ್ಯ ದೈವ ಶ್ರೀ ಕೊರಗಜ್ಜನ ವೇಷ ಭೂಷಣ ಧರಿಸಿ, ತಲೆಗೆ ಮುಟ್ಟಾಳೆ ಹಾಕಿ ಮುಖಕ್ಕೆ ಮಸಿ ಬಳಿದು ಕೊಂಡು ಕಾರಣಿಕ ದೈವಕ್ಕೆ ಅವಹೇಳನ ಮಾಡುವ ರೀತಿಯ ಹಾವಭಾವದೊಂದಿಗೆ ಬಂದಿದ್ದ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.