ಮಂಗಳೂರು: ಇಂದು ತುಳು ಭಾಷೆ ವಿಶ್ವವನ್ನೇ ವ್ಯಾಪಿಸಿದೆ. ಶಿವಳ್ಳಿಯ ತುಳು ಭಾಷಿಗರು ಜಗದಗಲ ವ್ಯಾಪಿಸಿಕೊಂಡಿದ್ದಾರೆ. ತುಳು ಭಾಷೆಯ ನಾನಾ ವಿಭಾಗಗಳಲ್ಲಿ ಈಗ ನಾನಾಡುತ್ತಿರುವ ಶಿವಳ್ಳಿ ತುಳು ಕೂಡಾ ಒಂದು ಎಂದು ತುಳುವೆರೆ ಏಳಾಟೊ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅರ್ಚಕ, ಯಕ್ಷ ಕಲಾವಿದ ವೇ|| ಮೂ|| ಶ್ರೀ ಹರಿನಾರಾಯಣದಾಸ ಆಸ್ರಣ್ಣರು ತುಳು ಭವನದಲ್ಲಿ ಹೇಳಿದರು.
‘ಸರಯೂ’ ಸಂಸ್ಥೆ ತುಳುಭವನದಲ್ಲೇ ಕಳೆದೆರಡು ವರ್ಷಗಳಿಂದ ಸಪ್ತಾಹೊ – ತುಳುವೆರೆ ಏಳಾಟೊ ಎಂಬ ಸಾಪ್ತಾಹಿಕ ಕಾರ್ಯಕ್ರಮವನ್ನು ವೃತದಂತೆ ನಡೆಸಿಕೊಂಡು ಬರುತ್ತಿದೆ. ಇಂತಹಾ ಪೌರಾಣಿಕ ಕಥೆಗಳ ಮೂಲಕ ತುಳು ಭಾಷೆಯ ಸೊಗಡನ್ನು ವೃದ್ಧಿಸುವ ಕಾರ್ಯ ಇಲ್ಲಾಗುತ್ತಿದೆ. ಇದಕ್ಕೆ ಅಕಾಡೆಮಿಯ ಪೂರ್ಣ ಸಹಕಾರವಿದ್ದು, ಈ ಕಾರ್ಯಕ್ರಮಕ್ಕೆ ನಾವು ಆರಾಧಿಸುವ ಶ್ರೀ ಕಟೀಲಮ್ಮ ಎಲ್ಲರಿಗೂ, ಲೋಕಕ್ಕೂ ಒಳ್ಳೆಯದನ್ನು ಮಾಡಲಿ’ ಎಂದು ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಅವರು “ತುಳುವಿನ ಉಳಿವು ಮತ್ತು ಬೆಳವಣೆಗೆ ಈ ತುಳು ಪವಿತ್ರ ಮಣ್ಣಿನವರಾದ ನಮಗೆ ಕರ್ತವ್ಯ ಇದರಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದರು. ಯಕ್ಷಗಾನ ಕಲಾವಿದ, ಸಂಘಟಕ, ನಿವೃತ್ತ ಉಪನ್ಯಾಸಕ ಶ್ರೀ ಜಿ. ಕೆ ಭಟ್ಟರನ್ನು ‘ಯಕ್ಷ ಸರಯೂ ಬಿರುದು ನೀಡಿ ಸನ್ಮಾನಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ರಾಜೇಶ್ ಜಿ. ಯಸ್, ಚೇತಕ್ ಪೂಜಾರಿ, ಶ್ರೀ ಸಿ. ಯಸ್ ಭಂಡಾರಿ ಶ್ರೀ ಉಮೇಶ್ ಸಾನದ ಮನೆ, ಶ್ರೀ ಸೆರಾಜೆ ಸೀತಾರಾಮ ಭಟ್, ಉಪಸ್ಥಿತರಿದ್ದರು. ನಿರ್ದೇಶಕ ಶ್ರೀ ರವಿ ಅಲೆವೂರಾಯರು ಸ್ವಾಗತಿಸಿದರೆ, ಅಮ್ಮಂಜೆ ಜನಾರ್ಧನರವರು ಸನ್ಮಾನವಿತ್ತರು. ಶ್ರೀ ಸುಧಾಕರ ರಾವ್ ಪೇಜಾವರ ನಿರೂಪಿಸಿದರು. ಬಳಿಕ ‘ಸಿರಿಯಪ್ಪೆ ಸಿರಿದೇವಿ’ ಎಂಬ ತುಳು ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.