ಮಂಗಳೂರು : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಐತಿಹಾಸಿಕ ಯಾನವಾದ ಶಿಖರದಿಂದ ಸಾಗರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ ಸೇರಿದ ಐವರು ಯುವತಿಯರು ಕಾಶ್ಮೀರದಲ್ಲಿನ ಕೊಲ್ಹೋಯಿ (Kolhol) (5425 ಮೀ) ಶಿಖರವನ್ನು ಏರಿ ತದನಂತರ ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್ ನ ಕರ್ ದೂಂಗ್ಲ ಪಾಸ್ ಮೂಲಕ 3350 ಕಿ.ಮೀ, ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಅಲ್ಲಿಂದ ರಾಜ್ಯದ ಕರಾವಳಿ ಸಮುದ್ರದಲ್ಲಿ 300 ಕಿ.ಮೀ, ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಿರುತ್ತಾರೆ.
ಅವರ ಈ ಯಾತ್ರೆಗೆ 2021ರ ಆಗಸ್ಟ್ 16 ರಂದು ಕ್ರೀಡಾ ಸಚಿವರು ಚಾಲನೆ ನೀಡಿದ್ದರು. ಈ ಯಾತ್ರೆಯು ಸುಮಾರು 70 ದಿನಗಳ ಸಾಹಸ ಯಾತ್ರೆಯಾಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ಸಮಾನತೆ, ಶ್ರೀ ಸಬಲೀಕರಣ ತತ್ತ್ವವನ್ನು ಬಿಂಬಿಸುವ ವಿಭಿನ್ನವಾದ ಕಾರ್ಯಕ್ರಮವಾಗಿದೆ.
ಭಾರತೀಯ ಪರ್ವತಾರೋಹಣ ಸಂಸ್ಥೆಯ ದಕ್ಷಿಣ ವಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ಈ ಸಾಹಸ ಯಾತ್ರೆಯನ್ನು ನಡೆಸಲಾಗುತ್ತಿದೆ.
ಕಾರವಾರದಿಂದ ಕಯಾಕ್ ಮೂಲಕ ಹೊರಟಿರುವ ಈ 5 ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವತಿಯರ ತಂಡವು 2021ರ ನವೆಂಬರ್ 01 ರಂದು ಮಂಗಳೂರಿನ ಉಲ್ಲಾಳ ಕಡಲ ತೀರಕ್ಕೆ ಆಗಮಿಸಿ, ಈ ಸಾಹಸ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ.