ಮಂಗಳೂರು: ಪ್ರಧಾನಿಯವರ ಆಶಯದಂತೆ ದಕ್ಷಿಣ ಕನ್ನಡ ಜಿಲ್ಲೆ ಸುಸಜ್ಜಿತವಾದ ಮತ್ತು ಶಾಶ್ವತವಾದ ಆಕ್ಸಿಜನ್ ಘಟಕವನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 16 ವೈದ್ಯಕೀಯ ಆಮ್ಲಜನಕ ಘಟಕಗಳ ಪೈಕಿ ವೆನ್ಲಾಕ್ನಲ್ಲಿ ಬೃಹತ್ ಗಾತ್ರದ (ಒಂದು ಸಾವಿರ ಲೀಟರ್ ಪರ್ ಮಿನಿಟ್ ) ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕ ಘಟಕವನ್ನು ಗುರುವಾರ ಲೋಕಾರ್ಪಣೆಗೊಳಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅರ್ಹ ರೋಗಿಗಳಿಗೆ ಇದರ ಪ್ರಯೋಜನ ಲಭಿಸಲಿದೆ ಎಂದು ಸಂಸದ ನಳಿನ್ ಕಟೀಲ್ ಹೇಳಿದ್ದಾರೆ.
ಆಮ್ಲಜನಕ ಘಟಕ ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಕೋವಿಡ್ ನಂತಹ ಯಾವುದೇ ಮಾರಕ ಕಾಯಿಲೆ ಎದುರಾದರೂ ಅದನ್ನು ಎದುರಿಸಲು ವೆನ್ಲಾಕ್ ಸಜ್ಜಾಗಿದೆ. ಅಗತ್ಯವಾದ ವೆಂಟಿಲೇಟರ್ , ಬೆಡ್ ವ್ಯವಸ್ಥೆ, ಆಕ್ಸಿಜನ್ ಘಟಕ ಎಲ್ಲವೂ ಇಲ್ಲಿದೆ. ಖಾಸಗಿ ಆಸ್ಪತ್ರೆಗಳಂತೆ ಗುಣಮಟ್ಟದ ಚಿಕಿತ್ಸೆ ವೆನ್ಲಾಕ್ ನಲ್ಲಿ ದೊರೆಯುತ್ತಿದೆ ಎಂದರು.
ಕೋವಿಡ್ ಎರಡನೇ ಅಲೆಯ ಸಂದರ್ಭ ಕೋವಿಡ್ ಸೋಂಕಿತ ರೋಗಿಗಳಿಗೆ ಆಮ್ಲಜನಕದ ಕೊರತೆ ಎದುರಾಗಿತ್ತು. ಕೊಚ್ಚಿ ಮತ್ತು ಬಳ್ಳಾರಿಯಿಂದ ಆಮ್ಲಜನಕ ತರಿಸಲಾಗಿತ್ತು. ಆದರೆ ಕೇರಳದಲ್ಲಿ ಅಮ್ಲಜನಕ ಕೊರತೆಯಾದ ಕಾರಣ ಕೊಚ್ಚಿಯಿಂದ ತರುವುದನ್ನು ನಿಲ್ಲಿಸಲಾಯಿತು. ಬಳ್ಳಾರಿಯಿಂದ ತರಿಸಲು ಟ್ಯಾಂಕರ್ ಸಮಸ್ಯೆ ಎದುರಾಗಿತ್ತು. ಆದ್ದರಿಂದ ಜಿಲ್ಲೆಯಲ್ಲಿಯೇ ಆಮ್ಲಜನಕ ಘಟಕ ಸ್ಥಾಪಿಸಲು ನಿರ್ಧರಿಸಲಾಯಿತು ಎಂದರು.
ಮೊದಲ ಅಮ್ಲಜನಕ ಘಟಕ ವೆನ್ಲಾಕ್ ನಲ್ಲಿ ಕಾರ್ಯಾರಂಭಿಸಲು ಆರಂಭಿಸಿದೆ. ಉಳಿದ 15ಕಡೆಯೂ ಶೀಘ್ರವೇ ಘಟಕ ಸಿದ್ಧವಾಗಲಿದೆ. ತಾಲೂಕು ಕೇಂದ್ರಗಳನ್ನು ಸೇರಿದಂತೆ ಉಪ್ಪಿನಂಗಡಿ, ವಾಮದಪದವು ಮುಂತಾದೆಡೆ ಘಟಕ ಆರಂಭಿಸಲಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.