ಪುತ್ತೂರು: ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲು ಸಂಪೂರ್ಣ ವಿಫಲವಾಗಿದ್ದು, ಪಠ್ಯ ಪುಸ್ತಕದಲ್ಲಿ ಸ್ತ್ರೀಯರಿಗೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೇಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಆರೋಪಿಸಿದರು.
ಪುತ್ತೂರು ಪ್ರೆಸ್ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ರೋಹಿತ್ ಚಕ್ರವರ್ತಿಯಂತಹ ವ್ಯಕ್ತಿಯನ್ನು ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷನನ್ನಾಗಿ ಮಾಡಿರುವ ಬಿಜೆಪಿ ಸರಕಾರ ಆರ್.ಎಸ್.ಎಸ್ ನ ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ತಲೆಗೆ ತುಂಬಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದ ಅವರು ಪಠ್ಯ ಪುಸ್ತಕ ಸಮಿತಿಯ ಈ ಗೊಂದಲದಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಪುಸ್ತಕವನ್ನೇ ನೀಡಲಾಗಿಲ್ಲ.
ವಿದ್ಯಾರ್ಥಿಗಳ ಪಾಠ,ಪ್ರವಚನಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ ಅವರು ಹೆಸರಾಂತ ಸಾಹಿತಿಗಳ ಪಠ್ಯಗಳನ್ನು ಪಾಠ ಪುಸ್ತಕದಿಂದ ತೆಗೆಯುವ ಮೂಲಕ ಸಾಹಿತಿಗಳಿಗೆ ಅವಮಾನ ಮಾಡಿದೆ ಎಂದ ಅವರು ಇದೇ ಕಾರಣಕ್ಕಾಗಿ ಸಾಹಿತಿಗಳು ಇದೀಗ ತಮ್ಮ ಪಠ್ಯಗಳನ್ನು ಪಾಠ ಪುಸ್ತಕದಿಂದ ಹಿಂದಕ್ಕೆ ಪಡೆಯುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದರು.
ಸರಕಾರದ ಈ ನೀತಿಯನ್ನು ವಿರೋಧಿಸಿ ನಾಳೆ ಕಾಂಗ್ರೇಸ್ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೂ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.