ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆ-ಚಾರ್ಮಾಡಿ ತನಕ ನಡೆಯಲಿದ್ದು,718 ಕೋಟಿ ರೂ. ಅನುದಾನ ಮಂಜೂರು ಗೊಂಡಿದೆ.ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಬೆಂಚ್ ಮಾರ್ಕಿಂಗ್ ಸೆಂಟ್ರಲ್ ಮಾರ್ಕಿಂಗ್, ಅಭಿವೃದ್ಧಿ ವೇಳೆ ತೆರವುಗೊಳ್ಳಬೇಕಾದ ಮರಗಳ ಸಮೀಕ್ಷೆಗಳು ನಡೆದಿದ್ದು ಇವೆಲ್ಲವು ಅಪೂರ್ಣವಾಗಿದ್ದು ಸರಕಾರದ ಆದೇಶದಂತೆ ತೆರವು ಹೊಸ ಸಮೀಕ್ಷೆ ನಡೆಸಬೇಕಾಗಿದೆ ಎಂದು ದ.ಕ.ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವೈ.ಕೆ.ದಿನೇಶ್ ಕುಮಾರ್ ಹೇಳಿದರು.
ಅವರು ಜೂ. 9ರಂದು ಬೆಳ್ತಂಗಡಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ಕರೆದಿದ್ದ, ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳ್ಳಬೇಕಾದ ಮರಗಳ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ರಸ್ತೆಯನ್ನು ಹೆಚ್ಚು ನೇರ ಗೊಳಿಸುವ ಉದ್ದೇಶದಿಂದ ಈ ಹೊಸ ಸಮೀಕ್ಷೆಗೆ ಆದೇಶಿಸಲಾಗಿದೆ.ಈ ಹಿಂದೆ ಈ ಪ್ರದೇಶದಲ್ಲಿ 35 ಕಿ.ಮೀ.ರಸ್ತೆ ಗುರುತಿಸಲಾಗಿದ್ದು ಇದು ನೇರಗೊಳ್ಳುವ ಕಾರಣ 33.1ಕಿ.ಮೀ.ಗೆ ಇಳಿಕೆಗೊಳ್ಳಲಿದೆ.
ಗುರುವಾಯನಕೆರೆಯಿಂದ ಉಜಿರೆಯ ಚಾರ್ಮಾಡಿ ರಸ್ತೆ ಪೆಟ್ರೋಲ್ ಬಂಕ್ ತನಕ 9.5 ಕಿಮೀ ರಸ್ತೆ ದ್ವಿಪಥವಾಗಿ ನಿರ್ಮಾಣಗೊಳ್ಳಲಿದ್ದು ಇದಕ್ಕೆ ಸರ್ವಿಸ್ ರಸ್ತೆಯು ಇರುತ್ತದೆ. ನಗರ ಪ್ರದೇಶದಲ್ಲಿ ರಸ್ತೆ ವ್ಯಾಪ್ತಿ 30ಮೀ. ಇರಲಿದೆ.ಉಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯ ವ್ಯಾಪ್ತಿ 18ರಿಂದ 20 ಮೀ.ಇರಲಿದೆ.ಜುಲೈ 11ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 88 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿ ವೇಳೆ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲು ಮೀಸಲಿರಿಸಲಾಗಿದೆ. ಈ ರಸ್ತೆಯ ಅಭಿವೃದ್ದಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ 50 ಎಕರೆ ಯಷ್ಟು ರಸ್ತೆ ವ್ಯಾಪ್ತಿಗೆ ಒಳಪಟ್ಟ ಭೂಮಿಯ ಅಗತ್ಯವಿದೆ. ಈ ಎಲ್ಲಾ ವಿಚಾರಗಳ ಸಂಪೂರ್ಣ ಚಿತ್ರಣ ಅಂತಿಮ ಹಂತದ ಸಮೀಕ್ಷೆಗಳು ನಡೆದ ಬಳಿಕವಷ್ಟೇ ತಿಳಿದು ಬರಬೇಕಾಗಿದೆ. ನೂತನ ಸಮೀಕ್ಷೆ ಕೂಡಲೇ ಆರಂಭವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎ.ಇ.ಇ.ಕೃಷ್ಣಕುಮಾರ್ ತಿಳಿಸಿದರು.
ಪಟ್ಟಾ ಜಾಗ, ಕಂದಾಯ,ಅರಣ್ಯ ಮೊದಲಾದ ಇಲಾಖೆಗಳ ವ್ಯಾಪ್ತಿಗೆ ಬರುವ ಮರಗಳನ್ನು ಗುರುತಿಸಿದ ಬಳಿಕ ಸಮಿತಿಯೊಂದನ್ನು ರಚಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವರದಿ ನೀಡಲಾಗುತ್ತದೆ. ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಮರಗಳನ್ನು ಖರೀದಿಸಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಕಡಿಯಬೇಕು. ಸಂಬಂಧಪಟ್ಟವರಿಗೆ ಇದರ ಪರಿಹಾರವನ್ನು ಪಾವತಿಸಬೇಕು. ನೂತನ ಸಮೀಕ್ಷೆ ವೇಳೆ ಖಾಸಗಿಯವರ ಜಾಗದ ಹೆಚ್ಚು ಮರಗಳು ಗುರುತಿಸಲ್ಪಡುವ ಸಾಧ್ಯತೆ ಇದೆ.ರಸ್ತೆ ಅಗಲೀಕರಣದ ವೇಳೆ ಉಳಿಯುವ ಹಳೆ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೂಚಿಸಿದರೆ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ.
ಸಹ್ಯಾದ್ರಿ ಸಂಚಯದಿಂದ ಮನವಿ:
ಪರಿಸರ ಪ್ರೇಮ ಹೊಂದಿರುವ ಮಂಗಳೂರಿನ ಸಹ್ಯಾದ್ರಿ ಸಂಚಯದ ವತಿಯಿಂದ ಕಾರ್ಗಿಲ್ ವನದ ರೂವಾರಿ ಮುಂಡಾಜೆಯ ಸಚಿನ್ ಭಿಡೆಯವರು ಅರಣ್ಯ ಇಲಾಖೆಗೆ ವಿಶೇಷ ಮನವಿ ನೀಡಿದ್ದು, ರಸ್ತೆ ಅಭಿವೃದ್ಧಿ ವೇಳೆ ಸ್ಥಳಾಂತರ ಮಾಡಲು ಸಾಧ್ಯವಿರುವ ಮರಗಳನ್ನು ಬೇರೊಂದು ಕಡೆಯಲ್ಲಿ ನೆಡಬೇಕು. ರಸ್ತೆ ಕಾಮಗಾರಿಯ ಜತೆ ಮೋರಿ,ಚರಂಡಿ,ಡ್ರೈನೇಜ್ ಮತ್ತು ಮೆಸ್ಕಾಂನ ಕಂಬ,ತಂತಿ ಜೋಡಣೆ ಬಗ್ಗೆ ಆಯಾಯ ಇಲಾಖೆಗಳಿಂದ ಮಾಹಿತಿ ಪಡೆದು ಅದಕ್ಕೆ ಪೂರಕವಾಗಿ ಕಾಮಗಾರಿ ನಡೆಸಬೇಕು. ರಾಷ್ಟ್ರೀಯ ಹೆದ್ದಾರಿ ಇಲಾಖೆಯು ನಿಗದಿತ ಸ್ಥಳಕ್ಕಿಂತ ಹೆಚ್ಚಿನ ಸ್ಥಳವನ್ನು ಗಿಡಮರಗಳನ್ನು ಬೆಳೆಯಲು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಬೇಕು ಎಂದು ತಿಳಿಸಿದರು.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಪರಿಸರ ಪ್ರೇಮಿ ದಿನೇಶ್ ಹೊಳ್ಳ, ಹೆದ್ದಾರಿ ಅಗಲೀಕರಣಕ್ಕಾಗಿ ಸಾವಿರಾರು ಮರಗಳನ್ನು ಕಡಿಯಲು ಸಿದ್ಧತೆಗಳು ಆಗಿವೆ. ಅಗತ್ಯ ಇಲ್ಲದ ಮರಗಳನ್ನು ಕಡಿಯದೆ ಉಳಿಸಲು, ಸ್ಥಳಾಂತರ ಮಾಡಲು ಆಗುವ ಮರಗಳನ್ನು ಸೂಕ್ತ ಸ್ಥಾನದಲ್ಲಿ ನೆಟ್ಟು ಬೆಳೆಸಬೇಕೆಂದು ಮತ್ತು ಕಡಿದ ಮರಗಳ ನಾಲ್ಕು ಪಟ್ಟು ಗಿಡಗಳನ್ನು ನೆಡಬೇಕೆಂದು ಮನವಿ ಮಾಡಿದರು.