ಯಲ್ಲಾಪುರ: ತಾಲೂಕಿನ ಆರತಿಬೈಲ ಘಟ್ಟದ ಬಳಗಾರ ಕ್ರಾಸ್ ಬಳಿ ರಾಸಾಯನಿಕ ಟ್ಯಾಂಕರ್ ಪಲ್ಟಿಯಿಂದ ಆದ ಭೀಕರ ದುರಂತದಲ್ಲಿ ರಾಸಾಯನಿಕ ದ್ರವ ಪಕ್ಕದ ಹಳ್ಳಕ್ಕೆ ಸೇರಿದ್ದು ಹೊಳೆಯ ನೀರು ಕಲ್ಮಷಗೊಂಡು ಆತಂಕಕ್ಕೆ ಕಾರಣವಾಗಿದೆ.
ಹೊಳೆಯ ನೀರಿನ ಮೇಲೆ ದ್ರಾವಣ ಹರಿಯುತ್ತಿದ್ದು ಇದು ಜಲಚರಗಳಿಗೆ ಅಪಾಯ ತರುವ ಭೀತಿ ಎದುರಾಗಿದೆ. ಪಕ್ಕದ ಗದ್ದೆಗಳಿಗೂ ಈ ದ್ರಾವಣ ವ್ಯಾಪಿಸಿದೆ. ಹೊಳೆಯ ಮೀನು ಮತ್ತಿತರ ಜಲಚರಗಳು, ಹೊಳೆ ನೀರು ಕುಡಿಯಲು ಬರುವ ದನಕರುಗಳು ಇದರಿಂದ ಬಾಧಿತವಾಗುವ ಭೀತಿಯನ್ನು ಜನ ವ್ಯಕ್ತಪಡಿಸತೊಡಗಿದ್ದಾರೆ.
ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ ಟ್ಯಾಂಕರ್ ಪಲ್ಟಿಯಾಗಿದ್ದು ಪೇಂಟ್ ತಯಾರಿಕೆಯಲ್ಲಿ ಬಳಸುವ ಕೆಮಿಕಲ್ ಟ್ಯಾಂಕರ್ ನಿಂದ. ಸೋರಿಕೆಯಾಗಿದೆ. ಇದು ಹಾಗೆಯೇ ಪಕ್ಕದ ಹೊಳೆಯ ನೀರನ್ನು ಸೇರಿದೆ. ಸ್ವಲ್ಪ ದೂರ ಹೋಗುತ್ತಲೇ ಈ ದ್ರಾವಣಕ್ಕೆ ಬೆಂಕಿ ಬಿದ್ದಿದ್ದು ಅದು ಹಿಮ್ಮುಖದಲ್ಲಿ ಚಲಿಸಿ ಟ್ಯಾಂಕರ್ ತನಕ ತಲುಪಿದೆ.
ಇದರಿಂದ ಟ್ಯಾಂಕರ್ ಸುಟ್ಟು ಹೋಗಿದೆ. ಬೆಳಿಗ್ಗೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದ್ದು ಅಗ್ನಿಶಾಮಕ ದಳದ ನಾಲ್ಕೂ ವಾಹನಗಳು ಹಾಗೂ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಶ್ರಮಿಸಿದ್ದಾರೆ.ಡಿ ವಾಯ್ ಎಸ್ ಪಿ ರವಿ ನಾಯ್ಕ, ಸಿಪಿ ಐ ಸುರೇಶ ಯಳ್ಳೂರ್, ಪಿ ಎಸ್ ಆಯ್ ಪ್ರಿಯಾಂಕಾ ನ್ಯಾಮಗೌಡ ಇದ್ದರು.
ಹೊಳೆಯಲ್ಲಿ ದೂರದವರೆಗೆ ಸಾಗಿದ ದ್ರಾವಣಕ್ಕೆ ಬೆಂಕಿ ತಗುಲಿದ್ದು ಹೇಗೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.
ಇದು ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕ ಹಾಕಿದ ಬೆಂಕಿಯೇ ಅಥವಾ ಇನ್ನೇನು ಕಾರಣ ಎನ್ನುವುದು ತಿಳಿದು ಬರಬೇಕಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಡಿವೈಎಸ್ಪಿ ರವಿ ನಾಯ್ಕ ಹೊಸದಿಗಂತಕ್ಕೆ ತಿಳಿಸಿದ್ದಾರೆ. ಘಟನೆಯಿಂದ ವಾಹನ ಸಂಚಾರಕ್ಕೆ ವ್ಯತ್ಯಯವಾಗಿದ್ದು, ಇಕ್ಕೆಲಗಳಲ್ಲಿ ವಾಹನಗಳ ಸಾಲು ಕಂಡು ಬಂತು.