ಬೆಳ್ತಂಗಡಿ: ಕಳೆದ ಜ. 8 ಮತ್ತು 9 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಬೇಕಾಗಿದ್ದ ಹಾಗು ಕೋವಿಡ್ ನಿಯಮಾವಳಿಗೆ ಅನುಗುಣವಾಗಿ ಮುಂದೂಡಲ್ಪಟ್ಟ ಅ.ಭಾ.ಸಾ.ಪ ಮೂರನೆಯ ರಾಜ್ಯ ಅಧಿವೇಶನವನ್ನು 2022ನೇ ಮಾ. 19 ಮತ್ತು 20 ರಂದು ನಡೆಸಲು ನಿರ್ಧರಿಸಲಾಗಿದೆ.
ಪೂರ್ವಯೋಜನೆಯಂತೆ ಅಧಿವೇಶನವು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದೆ. ಅಧಿವೇಶನಕ್ಕೆ ಸಂಬಂಧಿಸಿದ ಗೋಷ್ಠಿಗಳು,ಸಂಪನ್ಮೂಲ ವ್ಯಕ್ತಿಗಳು ಮತ್ತಿತರ ವಿವರಗಳು ಈ ಹಿಂದೆ ಆಯೋಜಿಸಿದಂತೆಯೇ ನಡೆಯಲಿದೆ ಎಂದು ರಾಜ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ತಿಳಿಸಿದ್ದಾರೆ.
ಅವರು ಫೆ.10 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದರು. ಉಜಿರೆಯ ಅಧಿವೇಶನಕ್ಕೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡು ಸರಕಾರದ ನಿಯಮಾವಳಿಯಂತೆ ಮುಂದೂಡಿಕೆ ಅನಿವಾರ್ಯವಾಗಿತ್ತು.
ಕಾರ್ಯಕರ್ತರ ಶ್ರಮ,ಉತ್ಸಾಹ ಮುಂದೂಡಿಕೆಯಿಂದ ಉಂಟಾದ ನೋವು ಕೇವಲ ಉಜಿರೆ ಮಾತ್ರವಲ್ಲ,ಇಡೀ ರಾಜ್ಯದ ಕಾರ್ಯಕರ್ತರಲ್ಲಿ ಬೇಸರ ಉಂಟು ಮಾಡಿತ್ತು. ಇದೀಗ ಇನ್ನು ಹೆಚ್ಚಿನ ಪರಿಶ್ರಮ ವಹಿಸಿ ಅಧಿವೇಶನವನ್ನು ಯಶಸ್ವಿಗೊಳಿಸಲು ಕಾರ್ಯಪ್ರವೃತ್ತರಾಗಬೇಕಾಗಿದೆ.
ಈ ನೆಲದ ಆಧ್ಯಾತ್ಮಿಕ ಶಕ್ತಿ,ಧಾರ್ಮಿಕ ಕೇಂದ್ರ ದ ಸೆಳೆತ ಹಾಗು ಸಂಘ ಪರಿವಾರದ ಶಕ್ತಿಯಿಂದ ಅಧಿವೇಶನವನ್ನು ಯಶಸ್ವಿಗೊಳಿಸಬೇಕು. ಈ ನೆಲಕ್ಕೆ ರಾಜ್ಯದ ಸಾಹಿತ್ಯಾಸಕ್ತರು ,ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿರಿಸಿದ್ದು ಯಡಳ್ಳಿ ಹಾಗು ಮೈಸೂರು ನಂತರದ ಉಜಿರೆ ಅಧಿವೇಶನ ಹೆಚ್ಚು ಅರ್ಥಪೂರ್ಣವಾಗಿ, ಸಾರ್ಥಕ್ಯ ಪಡೆಯಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ಕಾರ್ಯಕರ್ತರ ಕರ್ತೃತ್ವ ಶಕ್ತಿ ಸಾಕಾರಗೊಳ್ಳಬೇಕಾಗಿದೆ ಎಂದು ಎಲ್ಲರ ಸಹಕಾರ ಕೋರಿದರು.
ಆ .ಭಾ .ಸಾ.ಪ.ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದು ವಿವಿಧ ಸಮಿತಿಗಳ ಕಾರ್ಯ ಚಟುವಟಿಕೆಗಳ ಹಾಗು ಪ್ರಗತಿಯ ಕುರಿತು ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿದರು.
ಅ.ಭಾ.ಸಾ.ಪ ಜಿಲ್ಲಾ ಪದಾಧಿಕಾರಿಗಳಾದ ಡಾ! ಮಾಧವ ಎಂ.ಕೆ. ,ಪ್ರಕಾಶ ನಾರಾಯಣ , ಡಾ. ರವಿ ಎಂ.ಎನ್ , ವಿನಯಚಂದ್ರ , ರಮೇಶ ಮಯ್ಯ , ಪ್ರಶಾಂತ್, ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.