ಮಂಗಳೂರು : ಮಾನವ ಸಮಾಜವು ತನ್ನ ಉಗಮದ ಪ್ರಾರಂಭದಿಂದಲೇ ಸಂಘರ್ಷದ ಮೂಲಕ ವರ್ಗ ಹೋರಾಟದ ಇತಿಹಾಸವನ್ನು ಹೊಂದಿದೆ. ಬಂಡವಾಳಶಾಹಿ ವ್ಯವಸ್ಥೆಯೇ ಅಂತಿಮವೆಂದು ಬೀಗುತ್ತಿದ್ದ ಜಾಗತಿಕ ಬಂಡವಾಳ ಶಾಹಿಗಳಿಗೆ ಸಿಂಹಸ್ವಪ್ನರಾಗಿ ಕಾಡಿ ಬಂಡವಾಳ ಶಾಹಿಯ ಗರ್ಭದಿಂದಲೇ ಸಮಾಜವಾದಿ ವ್ಯವಸ್ಥೆ ಉಗಮವಾಗಲಿದೆ ಎಂದು ತನ್ನ ವೈಜ್ಞಾನಿಕ ಚಿಂತನೆಗಳ ಮೂಲಕ ಕಾರ್ಲ್ ಮಾರ್ಕ್ಸ್ ಸಾಬೀತು ಪಡಿಸಿದರು. ಕ್ರಾಂತಿಕಾರಿ ಗುಣ ಹೊಂದಿದ ಕಾರ್ಮಿಕ ವರ್ಗದಿಂದ ಮಾತ್ರವೇ ವರ್ಗ ರಹಿತ ಸಮಾಜದ ನಿರ್ಮಾಣ ಸಾಧ್ಯವೆಂದು ತನ್ನ ಪ್ರಖರ ಪಾಂಡಿತ್ಯದ ಮೂಲಕ ಜಗತ್ತಿಗೆ ಸಾರಿದರು.ಹೀಗೆ ಮಾನವ ಸಮಾಜದ ಬದಲಾವಣೆಗೆ ಕಾರ್ಲ್ ಮಾರ್ಕ್ಸ್ ಅಪಾರ ಕೊಡುಗೆ ನೀಡಿದ್ದರು ಎಂದು ಡಾ.ಕ್ರಷ್ಣಪ್ಪ ಕೊಂಚಾಡಿಯವರು ಅಭಿಪ್ರಾಯಪಟ್ಟರು.
ಅವರು ಕಾರ್ಲ್ ಮಾರ್ಕ್ಸ್ ರವರ 139ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸಹಸ್ರಮಾನದ ಮಹಾನ್ ಚಿಂತಕ ಕಾರ್ಲ್ ಮಾರ್ಕ್ಸ್ ಎಂಬ ವಿಷಯದಲ್ಲಿ ಮಂಗಳೂರಿನಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು
ಸಭೆಯ ಅಧ್ಯಕ್ಷತೆ ವಹಿಸಿದ DYFI ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರುರವರು ಮಾತನಾಡುತ್ತಾ, ಜಗತ್ತಿನ ಹಲವಾರು ತತ್ವಜ್ಞಾನಿಗಳ ಪೈಕಿ ಕಾರ್ಲ್ ಮಾರ್ಕ್ಸ್ ರವರಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಜಗತ್ತಿನ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಮಾರ್ಕ್ಸ್ ರವರು ವೈಜ್ಞಾನಿಕ ನೆಲೆಯಲ್ಲಿ ತನ್ನದೇ ಆದ ಅಭಿಪ್ರಾಯಗಳನ್ನು ಹೊಂದಿದ್ದರು.ಈ ಹಿನ್ನೆಲೆಯಲ್ಲಿ ಕಾರ್ಲ್ ಮಾರ್ಕ್ಸ್ ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದು ಹೇಳಿದರು.
ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ ಕೊನೆಯಲ್ಲಿ ಭಾರತಿ ಬೋಳಾರರವರು ವಂದಿಸಿದರು.