ಮಂಗಳೂರು: ಮೇ 27 ರಂದು ಮಂಗಳೂರು ನಗರದ ಕಣ್ಣೂರು ಮೈದಾನದಲ್ಲಿ ಎಸ್ಡಿಪಿಐ ವತಿಯಿಂದ ಬೃಹತ್ ಜನಾಧಿಕಾರ ಸಮಾವೇಶ ನಡೆಯಲಿದೆ ಎಂದು ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಹೇಳಿದ್ದಾರೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನಲ್ಲಿರೋ ಎಸ್ ಡಿಪಿಐ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2018 ರ ಕರ್ನಾಟಕ ವಿಧಾನಸಭೆ ಚನಾವಣೆಯಲ್ಲಿ ಸ್ಪಷ್ಟ ಬಹುಮತಗಳಿಲ್ಲದ ಕಾರಣ ಬಿ.ಜೆ.ಪಿಯನ್ನು ಅಧಿಕಾರದಿಂದ ದೂರ ಇರಿಸಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳ ಮೈತ್ರಿ ಸರಕಾರವು ಆಡಳಿತದ ಚುಕ್ಕಾಣಿ ಹಿಡಿಯಿತು. ಬಿ.ಜೆ.ಪಿ ತನ್ನ ವಂಚನೆಯ ರಾಜಕೀಯವಾದ ಜನಾಭಿಮತವನ್ನು ಧಿಕ್ಕರಿಸಿ ಇತರ ಪಕ್ಷಗಳ ಶಾಸಕರನ್ನು ಖರೀದಿಸುವ ಮೂಲಕ ಬಿ.ಜೆ.ಪಿ ಅಧಿಕಾರಕ್ಕೆ ಬಂದಿದ್ದು, ರಾಜ್ಯ ಕಂಡ ಅತ್ಯಂತ ದ್ವೇಷ ಮತ್ತು ಕೆಟ್ಟ ಆಡಳಿತವನ್ನು ನೀಡುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯದಲ್ಲಿ ಕಳೆದ 3 ತಿಂಗಳಿನಿಂದ ನಿರಂತರವಾಗಿ ಹಗರಣಗಳು ರಾಜಾರೋಷವಾಗಿ ನಡೆಯುತ್ತಿದೆ. ಸರಕಾರಿ ಗುತ್ತಿಗೆಯಲ್ಲಿ 40 % ಕಮಿಷನ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ ಎಂದು ಸ್ವಯಂ ಗುತ್ತಿಗೆದಾರರೆ ಹೇಳಿಕೊಂಡಿರುವುದಲ್ಲದೇ ಈ ಕೃತ್ಯ ವಿರೋಧಿಸುವ ಅಮಾಯಕ ಜೀವಗಳು ಇವರ ಹಗರಣಗಳಿಗೆ ಬಲಿಯಾಗುತ್ತಿದೆ ಎಂದು ಕಿಡಿಕಾರಿದರು.
ಸರಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ವಿದ್ಯೆ ಮತ್ತು ಕೌಶಲ್ಯಕ್ಕಿಂತ ಹೆಚ್ಚಾಗಿ ಲಕ್ಷ ಲಕ್ಷ ಹಣದೊಂದಿಗೆ ಸರಕಾರಿ ಉದ್ಯೋಗ ಪೂರೈಸಲಾಗುತ್ತಿದೆ. ಲಂಚದ ಮೂಲಕ ಸರಕಾರಿ ಉದ್ಯೋಗಕ್ಕೆ ಬರುವ ವ್ಯಕ್ತಿಗಳು ಸಾಮಾನ್ಯ ಜನರನ್ನು ಲೂಟಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಜನಸಾಮಾನ್ಯರ ಯಾವೊಂದು ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದ ಈ ಸರಕಾರ ಹಿಂದೂ-ಮುಸ್ಲಿಂ ಕ್ರೈಸ್ತರೆಂಬ ಧಾರ್ಮಿಕ ವಿಭಜನೆಗಳನ್ನು ಮಾಡಿಸಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದು ದುರಂತ.
ಯುವಕರಲ್ಲಿ ಹಿಂದುತ್ವವೆಂಬ ಅಮಲನ್ನು ತುಂಬಿಸಿ ಸಹಬಾಳ್ವೆಯಿಂದ ಬದುಕುತ್ತಿದ್ದ ಜನರನ್ನು ಪರಸ್ಪರ ದ್ವೇಷಿಸುವ ಜನರನ್ನಾಗಿ ಮಾಡುವ ಚುನಾವಣಾ ಅಜೆಂಡಾ ಬಿ.ಜೆ.ಪಿಯ ದ್ವೇಷ ರಾಜಕೀಯವನ್ನು ಎತ್ತಿ ತೋರಿಸುತ್ತಿದೆ. ಮುಸ್ಲಿಂ ವ್ಯಾಪಾರ ಬಹಿಷ್ಕಾರ, ಮುಸ್ಲಿಂ ವಿದ್ಯಾರ್ಥಿನಿಯರ ತಲೆವಸ್ತ್ರ ವಿವಾದ, ಗೋಹತ್ಯೆ ತಡೆ ಕಾಯ್ದೆ, ಅಝಾನ್ ಕರೆ ತಡೆ, ಕ್ರೈಸ್ತರ ಪಾದ್ರಿಗಳ ಮೇಲೆ ಹೀಗೆ ದಿನಕ್ಕೊಂದು ವಿವಾದಗಳು ಮುನ್ನಲೆಗೆ ಬರುತ್ತಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಶಾಲೆಯೊಂದರಲ್ಲಿ ನಡೆದ ಶಸ್ತ್ರಾಸ್ತ್ರ ಭಯೋತ್ಪಾದನಾ ತರಬೇತಿ ರಾಜ್ಯವನ್ನು ಭಯಭೀತಿಗೊಳಿಸಿದೆ ಎಂದರು. ಹೀಗಾಗಿ ಜನರು ನ್ಯಾಯ ಮತ್ತು ಪರಿಹಾರವನ್ನು ಬಯಸಿದ್ದಾರೆ. ಹೀಗಾಗಿ ಮೇ 27. ರ ಶುಕ್ರವಾರ ಮಧ್ಯಾಹ್ನ 2.30 ಕ್ಕೆ ಕಣ್ಣೂರು ಮೈದಾನದಲ್ಲಿ ಐತಿಹಾಸಿಕ ಬೃಹತ್ ಜನಾಧಿಕಾರ ಸಮಾವೇಶ ನಡೆಯಲಿದೆ ಎಂದರು.