ಮಂಗಳೂರು: ಉಳುವವನೇ ಹೊಲದೊಡೆಯ ಎಂಬ ಕಾನೂನಿಗಾಗಿ ಅವಿಭಜಿತ ಜಿಲ್ಲೆಯಲ್ಲಿ ರೈತಾಪಿ ಜನತೆ ನಡೆಸಿದ ಸಮರಧೀರ ಹೋರಾಟದ ಫಲವಾಗಿ ಬಡವರಿಗೆ ರೈತರಿಗೆ ಭೂಮಿ ಪಡೆಯಲು ಸಾಧ್ಯವಾಯಿತು. ಇಂತಹ ಪ್ರಮುಖ ಹೋರಾಟದ ರುವಾರಿಯಾಗಿ ದುಡಿಯುವ ವರ್ಗದ ಕಣ್ಮಣಿಯಾಗಿ ಮೂಡಿದ ಎಂ.ಎಚ್ ಕ್ರಷ್ಣಪ್ಪರವರ ನಾಯಕತ್ವ ಜಿಲ್ಲೆಗೆ ಮಾದರಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿಯವರು ಅಭಿಪ್ರಾಯ ಪಟ್ಟರು.
ಸ್ವಾತಂತ್ರ್ಯ ಹೋರಾಟಗಾರರೂ, ಹಿರಿಯ ಕಮ್ಯುನಿಸ್ಟ್ ನಾಯಕರಾಗಿದ್ದ ಕಾಂ.ಎಂ.ಎಚ್ ಕ್ರಷ್ಣಪ್ಪ ರವರ 11ನೇ ಸಂಸ್ಕರಣಾ ದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ರೈತ ಚಳುವಳಿಯ ಹಿರಿಯ ನೇತಾರ ಎಂ.ಎಚ್. ಎಂಬ ವಿಷಯದ ಬಗ್ಗೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸುತ್ತಾ ಈ ಮಾತುಗಳನ್ನು ಹೇಳಿದರು.
ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ, ಕಾರ್ಮಿಕ ಮುಖಂಡರಾದ ಸುಕುಮಾರ್,ಸಮುದಾಯದ ವಾಸುದೇವ ಉಚ್ಚಿಲ್ ರವರು ಪೂರಕ ಮಾತುಗಳನ್ನಾಡುತ್ತಾ, ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂ.ಎಚ್.ರವರು ಬಳಿಕ ರಾಜೀನಾಮೆ ನೀಡಿ ಜನಸಾಮಾನ್ಯರ ಉತ್ತಮ ಬದುಕಿಗಾಗಿ ತನ್ನ ಸರ್ವಸ್ವವನ್ನೂ ಮೀಸಲಿಟ್ಟು ರೈತ ಕಾರ್ಮಿಕರ ಏಳಿಗೆಗಾಗಿ ಶ್ರಮಿಸಿದರು. ಮೂರ್ತೆದಾರರನ್ನು ಕೂಡ ಸಂಘಟಿಸಿ ಪ್ರಬಲ ಹೋರಾಟಕ್ಕೆ ಮುನ್ನುಡಿ ಬರೆದವರು ಎಂ.ಎಚ್.ರವರ ಇಡೀ ಜೀವನವೇ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಅಖಿಲ ಬಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಯಶವಂತ ಮರೋಳಿಯವರು ಮಾತನಾಡುತ್ತಾ, ತನ್ನ ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಸಿಕೊಂಡ ಎಂ.ಎಚ್ ರವರು ತನ್ನ ಕೊನೆಯ ಉಸಿರು ಇರುವವರೆಗೂ ಕಮ್ಯುನಿಸ್ಟರಾಗಿ ಬಾಳಿ ಬದುಕಿದರು ಹಾಗೂ ಎಲ್ಲರನ್ನು ಪ್ರೀತಿಸಿ,ಇಡೀ ಜಗತ್ತೇ ಒಂದು ಕುಟುಂಬ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು ಎಂದು ಹೇಳಿದರು.
ವೇದಿಕೆಯಲ್ಲಿ ವಕೀಲರ ಸಂಘಟನೆಯ ನಾಯಕರಾದ ರಾಮಚಂದ್ರ ಬಬ್ಬುಕಟ್ಟೆಯವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ,ಕೊನೆಯಲ್ಲಿ ಮನೋಜ್ ವಾಮಂಜೂರು ರವರು ವಂದಿಸಿದರು .