News Karnataka Kannada
Monday, April 29 2024
ಮಂಗಳೂರು

“ಭರತನಾಟ್ಯ ರಂಗಪ್ರವೇಶ” ಕ್ಕೆ ಸಜ್ಜಾದ ಉದಯೋನ್ಮುಖ ಪ್ರತಿಭೆ ಮಹಿಮಾ

Mahima
Photo Credit :
ಬಂಟ್ವಾಳ : ಸಂಸ್ಕೃತದಲ್ಲಿ ‘ಮಹಿಮಾ’ ಎಂದರೆ ಶ್ರೇಷ್ಠತೆ. ಈ ಶಬ್ದಾರ್ಥವನ್ನು ತನ್ನ ಪ್ರತಿಭೆಯ ಮೂಲಕ  ಸಾಕಾರಗೊಳಿಸಲು ಹೊರಟಿದ್ದಾಳೆ ಕು.ಮಹಿಮ ಎಂ. ಪಣಿಕ್ಕರ್. ನಾಲ್ಕು ತಲೆಮಾರಿನ ಆಯುರ್ವೇದ ವೈದ್ಯ ಪರಂಪರೆಯನ್ನು ಹೊಂದಿರುವ ತಂದೆ ಡಾ| ಮನೋಜ್ ಕುಮಾರ್ ಪಣಿಕ್ಕರ್ ಮತ್ತು ಶಾಸ್ತ್ರೀಯ ನೃತ್ಯಕಲೆ ಭರತನಾಟ್ಯವನ್ನೇ ಉಸಿರಾಗಿಸಿಕೊಂಡಿರುವ ತಾಯಿ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರೀರ್ವರಿಂದಲೂ ರಕ್ತಗತವಾಗಿ ಬಂದಿರುವಂತಹ ವೈದ್ಯ ಹಾಗೂ ಕಲಾ ಪರಂಪರೆಯನ್ನು ಆರ್ಜಿಸಿಕೊಳ್ಳುತ್ತಿರುವವಳು ಮಹಿಮ.
ತಾಯಿಯೇ ಗುರು – ತನ್ನ ತಾಯಿಯನ್ನೇ ಗುರುವಾಗಿ ಪಡೆದಿರುವಂತಹ ಮಹಿಮ ಐದರ ಎಳೆವಯಸ್ಸಿನಲ್ಲಿ ಭರತನಾಟ್ಯ ಶಿಕ್ಷಣವನ್ನು ಪಡೆಯಲಾರಂಭಿಸಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುತ್ತಿರುವ ಭರತನಾಟ್ಯ ವಿದ್ವತ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾಳೆ. ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲಾ ಸಂಸ್ಥೆಯ ವಿದ್ಯಾರ್ಥಿನಿಯೂ, ಕಲಾವಿದೆಯೂ ಆಗಿ ಇನ್ನೂರಕ್ಕೂ ಮಿಕ್ಕಿ ಏಕವ್ಯಕ್ತಿ ಹಾಗೂ ತಂಡದೊಂದಿಗೆ ರಾಜ್ಯ, ಹೊರರಾಜ್ಯಗಳ ಹಲವೆಡೆ ಪ್ರದರ್ಶನಗಳನ್ನು ನೀಡಿ ತನ್ನ ಪ್ರತಿಭೆಯ ಅನಾವರಣಗೊಳಿಸಿದ್ದಾಳೆ.
ತಿರುಪತಿಯ ನಾದನೀರಾಜನಂ ಟಿಟಿಡಿ, ಧರ್ಮಸ್ಥಳ ಲಕ್ಷದೀಪೋತ್ಸವ, ಕೇರಳದ ಗುರುವಾಯೂರು ದೇವಸ್ಥಾನ, ಜಗತ್ಪ್ರಸಿದ್ಧ ಮೈಸೂರು ದಸರಾ, ಮಡಿಕೇರಿ ದಸರಾ, ಶ್ರೀ ಕೃಷ್ಣಧಾಮ ಉತ್ತರ ಕನ್ನಡ, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್, ಉಡುಪಿ ರಾಜಾಂಗಣ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹೀಗೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಲಾ ಪ್ರದರ್ಶನವನ್ನು ನೀಡಿದ್ದಾಳೆ.
ಶಂಕರ ಟಿವಿಯ ಭರತನಾಟ್ಯ ರಿಯಾಲಿಟಿಶೋ ನಾಟ್ಯರತ್ನದಲ್ಲಿ ಕ್ವಾರ್ಟರ್ ಫೈನಲ್ ಸುತ್ತಿನವರೆಗೆ ಸ್ಪರ್ಧಿಸಿದ ಮಹಿಮಾ 10ರ ವಯಸ್ಸಿನಲ್ಲಿಯೇ ಬಾಲ ಕಲಾಶ್ರೀ  ಪ್ರಶಸ್ತಿಯನ್ನು ಪಡೆದವಳು. ಕೇವಲ ನೃತ್ಯಕ್ಕಷ್ಟೇ ಸೀಮಿತಳಾಗದೆ ಬರವಣಿಗೆಯತ್ತ ಆಕರ್ಷಿತಳಾದ ಈಕೆ, ಶಾಲಾ ದಿನಗಳಲ್ಲಿ ದೇಶದ 30 ಅತ್ಯುತ್ತಮ ಬರಹಗಾರರಲ್ಲಿ ಒಬ್ಬಳಾಗಿ ಗುರುತಿಸಿಕೊಂಡವಳು. ಸಂಗೀತ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ  ಮಹಿಮಾ ಶ್ರೀಯುತ ಯತಿರಾಜ್ ಆಚಾರ್ಯ ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ ಜೂನಿಯರ್ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾಳೆ.
ಈಕೆಯ ಚುರುಕು ಬುದ್ಧಿಗೆ ಹಿಡಿದ ಕೈಗನ್ನಡಿಯೋ ಎಂಬಂತೆ ನೀಟ್ ಪರೀಕ್ಷೆಯಲ್ಲಿ ಆಕೆಯ ವಿದ್ಯಾಸಂಸ್ಥೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಲ್ಲಿ ಮಹಿಮಳೂ ಓರ್ವಳು. ತಾಯಿ ವಿದುಷಿ ವಿದ್ಯಾಮನೋಜ್ ರವರಿಂದ ನೃತ್ಯ ಕಲೆಯನ್ನು ಮೈಗೂಡಿಸಿಕೊಂಡಂತೆ, ತಂದೆ ಡಾ.ಮನೋಜ್ ಪಣಿಕ್ಕರ್ ರಿಂದ ಬಂದಿರುವಂತಹ ವೈದ್ಯಶಾಸ್ತ್ರವನ್ನು ಮೈಗೂಡಿಸಿಕೊಳ್ಳುವುದಕ್ಕಾಗಿ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಾಳೆ.
 ದಶಂಬರ್ 26 ರಂದು ರಂಗಪ್ರವೇಶ
ಉದಯೋನ್ಮುಖ ಭರತನಾಟ್ಯ ಕಲಾವಿದೆ  ಮಹಿಮಾ ಎಂ. ಪಣಿಕರ್ ರವರ   ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು    ಡಿ.26ರ ಭಾನುವಾರ ಸಂಜೆ 5.45 ರಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ  ‘ಶಾಂತಲಾ ನಾಟ್ಯ’ ಪುರಸ್ಕೃತ ನೃತ್ಯಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್, ಪುತ್ತೂರು ಪದಡ್ಕದ ವಿಶ್ವಕಲಾನಿಕೇತನ ಕಲಾ ಮತ್ತು ಸಂಸ್ಕೃತಿ ಸಂಸ್ಥೆಯ ನೃತ್ಯಗುರು ವಿದುಷಿ ನಯನಾ ವಿ.ರೈ ಭಾಗವಹಿಸಲಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು